ರಾಯ್ಪುರ: ಬಿಜೆಪಿಯ ಕೋಟೆಯಾದ ಛತ್ತೀಸ್ಗಢದಲ್ಲಿ 15 ವರ್ಷಗಳ ಬಳಿಕ ಮತದಾರ ‘ಕೈ’ ಕುಲುಕಿದ್ದಾನೆ.
ಮೂರು ಬಾರಿ ಮುಖ್ಯಮಂತ್ರಿ ಆಗಿದ್ದ ರಮಣ್ ಸಿಂಗ್ ಕೆಳಗಿಳಿದಿದ್ದಾರೆ. 15 ವರ್ಷಗಳಿಂದ ಅಧಿಕಾರ ಬರ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಚಿಗುರಿದೆ. ಮತ ಎಣಿಕೆ ಆರಂಭದಿಂದಲೂ ಕಾಂಗ್ರೆಸ್ ನಾಗಾಲೋಟದಲ್ಲೇ ಮುಂದುವರಿದಿತ್ತು.
ಛತ್ತೀಸಗಡದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮಕ್ಕೆ 45 ಸ್ಥಾನಗಳು ಬೇಕು. ಇದರಲ್ಲಿ ಕಾಂಗ್ರೆಸ್ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು, ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಆಡಳಿತರೂಢ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಇತರರು ಈ ಬಾರಿ 8 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದಾರೆ
2013ರ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 39 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇತರರು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು.
ಬಿಜೆಪಿ ಸೋಲಿಗೆ ಕಾರಣಗಳೇನು?
– 10 ವರ್ಷದ ರಮಣ್ಸಿಂಗ್ ಆಡಳಿತಕ್ಕೆ ಬೇಸತ್ತು ಬಂದಿರುವ ತೀರ್ಪು ಇದಾಗಿದೆ. ಏಕೆಂದರೆ ಚಾವಲ್ ಬಾಬಾ ಎಂದೇ ಹಾಲಿ ಸಿಎಂ ರಮಣ್ ಸಿಂಗ್ ಮೇಲೆ 36 ಸಾವಿರ ಕೋಟಿ ರೂಪಾಯಿ ಪಡಿತರ ಅಕ್ಕಿ ಹಗರಣ ಹಾಗೂ 5 ಸಾವಿರ ಕೋಟಿ ರೂ. ಚಿಟ್ ಫಂಡ್ ಹಗರಣ ಆರೋಪ ಕೇಳಿಬಂದಿತ್ತು. ಅಲ್ಲದೇ ಅವರ ಪತ್ನಿ, ನಾದಿನಿಯರು ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪ ಇದೆ.
– ಬಿಜೆಪಿಯ ಸಂಘಟನೆ ಅಥವಾ ಪ್ರಧಾನಿ ನರೇಂದ್ರ ಮೋದಿ ಅಲೆ ಛತ್ತೀಸಗಢದಲ್ಲಿ ವಿಫಲವಾಗಿತ್ತು. ಸರ್ಕಾರದ ಮೇಲೆ ಮೊದಲೇ ಆಕ್ರೋಶಗೊಂಡಿದ್ದರಿಂದ ಮೋದಿ ಪ್ರಚಾರ ಮಾಡಿದ್ದ ಕ್ಷೇತ್ರಗಳಲ್ಲೂ ನಿರೀಕ್ಷಿತ ಮತ ಬೀಳಲಿಲ್ಲ.
– ಬುಡಕಟ್ಟು ಪಾರ್ಟಿ ಎನ್ನುವ ಪಟ್ಟದಿಂದ ಹೊರ ಬಂದ ಕಾಂಗ್ರೆಸ್ ಈ ಬಾರಿ ಒಬಿಸಿ ಮುಖಂಡರನ್ನೇ ಅಗ್ರನಾಯಕರನ್ನಾಗಿ ನೇಮಿಸಿತ್ತು. ಬಗೇಲ್ ಕುರ್ಮಿ, ಸಾಹು, ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಎಲ್ಲರೂ ಒಬಿಸಿ ನಾಯಕರು ಆಗಿದ್ದ ಕಾರಣ ಕಾಂಗ್ರೆಸ್ಗೆ ಜಾಕ್ಪಾಟ್ ಹೊಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv