ಬೆಂಗಳೂರು: ನೇಣು ಬಿಗಿದುಕೊಂಡು ವೈದ್ಯೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಂದಿನಿ ಲೇಔಟ್ನ ಸಾಕಮ್ಮ ಬಡಾವಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಶ್ವಿನಿ (32) ಆತ್ಮಹತ್ಯೆಗೆ ಶರಣಾದ ವೈದ್ಯೆ. ನಂದಿನಿ ಲೇಔಟ್ನ ಕೃಷ್ಣಾನಂದ ನಗರದಲ್ಲಿರುವ ಬಿಬಿಎಂಪಿ ಆಸ್ಪತ್ರೆಯಲ್ಲಿ ಅಶ್ವಿನಿಯವರು ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತವರು ಮನೆಯಾದ ನಂದಿನಿ ಲೇಔಟ್ನ ಸಾಕಮ್ಮ ಬಡಾವಣೆಯಲ್ಲಿ ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ಸೋಮವಾರ ರಾತ್ರಿ ಮನೆಗೆ ಬಂದ ಅವರು ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ.
ಇಂದು ಕೊಠಡಿಯನ್ನು ಪರೀಕ್ಷಿಸಿದಾಗ ಅಶ್ವಿನಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಮೂರು ವರ್ಷದ ಹಿಂದೆ ಡಾ.ಲೋಹಿತ್ ಎಂಬಾತನೊಂದಿಗೆ ಅಶ್ವಿನಿ ಮದುವೆ ನಡೆದಿತ್ತು. ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು, ನಮ್ಮ ಜೊತೆಯಲ್ಲೇ ವಾಸವಾಗಿದ್ದಳು. ಪತಿಯ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಶ್ವಿನಿ ಕುಟುಂಬದವರು ಪತಿ ಲೋಹಿತ್ ಮೇಲೆ ಆರೋಪ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv