ಚಿಕ್ಕಮಗಳೂರು: ಜಿಲ್ಲೆಯಲ್ಲಿ 5 ಮತಕ್ಷೇತ್ರಗಳಿದ್ದು, 2013ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಲಾ ಎರಡು ಕ್ಷೇತ್ರದಲ್ಲಿ ಜಯಗಳಿಸಿತ್ತು. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ ಮರೆಯಾಗಿದ್ದು, ಬಿಜೆಪಿ 4 ಕ್ಷೇತ್ರದಲ್ಲಿ ಜಯಗಳಿಸಿದೆ.
2013ರಲ್ಲಿ ಶೃಂಗೇರಿ ಕ್ಷೇತ್ರದಿಂದ ಬಿಜೆಪಿಯ ಡಿ.ಎನ್.ಜೀವರಾಜ್ ಜಯಗಳಿಸಿದ್ದರು. ಆದರೆ, ಈ ಬಾರಿ ಅವರು ಕೇವಲ 2,013 ಮತಗಳ ಅಂತರದಲ್ಲಿ ಸೋತಿದ್ದಾರೆ. ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರು 62,469 ಮತ ಪಡೆದು ಜಯಗಳಿಸಿದ್ದಾರೆ.
ಮೂಡಿಗೆರೆ ಮತಕ್ಷೇತ್ರದಿಂದ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಅವರು 58,783 ಮತ ಪಡೆದು ಜಯಗಳಿಸಿದ್ದಾರೆ. ಎದುರಾಳಿ ಕಾಂಗ್ರೆಸ್ನ ಮೋಟಮ್ಮ ಅವರು 46,271 ಮತ ಪಡೆದು ಸೋತಿದ್ದಾರೆ. 2013ರಲ್ಲಿ ಜಯಗಳಿಸಿದ್ದ ಬಿ.ಬಿ.ನಿಂಗಯ್ಯ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ.
2013ರಲ್ಲಿ ಚಿಕ್ಕಮಗಳೂರು ಮತಕ್ಷೇತ್ರದಿಂದ ಬಿಜೆಪಿಯ ಸಿ.ಟಿ.ರವಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿಯೂ ಅವರು 69,863 ಮತ ಪಡೆದು ಜಯಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಅವರು 25,716 ಮತಗಳ ಅಂತರದಿಂದ ಸೋತಿದ್ದಾರೆ.
ತರೀಕರೆ ಮತಕ್ಷೇತ್ರದಲ್ಲಿ ಕಾಂಗ್ರೆಸ್ನ್ನು ಹಿಂದಿಕ್ಕಿ ಬಿಜೆಪಿಯ ಡಿ.ಎಸ್.ಸುರೇಶ್ ಅವರು 11,687 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಎದುರಾಳಿ ಪಕ್ಷೇತರ ಅಭ್ಯರ್ಥಿ ಜಿ.ಎಚ್.ಶ್ರೀನಿವಾಸ್ ಅವರು 33,253 ಮತಪಡೆದು ಸೋತಿದ್ದರು. 2013ರಲ್ಲಿ ಅವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
2013ರಲ್ಲಿ ಕಡೂರು ಮತಕ್ಷೇತ್ರದಿಂದ ಜೆಡಿಎಸ್ನ ವೈ.ಎಸ್.ವಿ.ದತ್ತ ಜಯಗಳಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಅವರಿಗೆ ಭಾರಿ ಪೈಪೋಟಿ ನೀಡಿದ ಬಿಜೆಪಿಯ ಬೆಳ್ಳಿ ಪ್ರಕಾಶ್ ಅವರು 15,372 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವೈ.ಎಸ್.ವಿ.ದತ್ತ ಅವರು 46,860 ಮತ ಪಡೆದು ಸೋತಿದ್ದಾರೆ.