ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಆಪ್ತ ಹೆಚ್.ಸಿ.ಮಹದೇವಪ್ಪ ರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಗ್ ಶಾಕ್ ನೀಡಿದೆ.
ಈ ಬಾರಿಯ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಮಹದೇವಪ್ಪ ಇಬ್ಬರಿಗೂ ಕ್ಷೇತ್ರ ಬದಲಾವಣೆ ಮಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ ಅಂತಾ ಹೇಳಲಾಗ್ತಿದೆ. ಈ ಬಾರಿ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ತಮ್ಮ ವರುಣಾ ಕ್ಷೇತ್ರದಲ್ಲಿ ಪುತ್ರ ಯತೀಂದ್ರ ಅವರನ್ನ ಕಣ್ಣಕ್ಕೀಳಿಸುವ ಯೋಚನೆಯಲ್ಲಿದ್ದಾರೆ. ಇತ್ತ ಪುತ್ರ ಯತೀಂದ್ರನಿಗಾಗಿ ವರುಣಾ ಕ್ಷೇತ್ರಕ್ಕೆ ನಿಂತರೆ, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇತ್ತ ಸಿಎಂ ಆಪ್ತ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗಾಗಿ ತಮ್ಮ ವಿಧಾನಸಭಾ ಕ್ಷೇತ್ರವನ್ನು ಬದಲಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಾಯಕರ ಕ್ಷೇತ್ರ ಬದಲಾವಣೆ ಮಾಡೋದು ಬೇಡ ಎಂಬ ಸಲಹೆ ನೀಡಿದೆ ಎನ್ನಲಾಗಿದೆ. ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ನಾಯಕರು ಕೂಡ ತಮ್ಮ ಮಕ್ಕಳಿಗೆ ಟಿಕೆಟ್ ಕೇಳುತ್ತಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಸಿಎಂ ಹಾಗು ಮಹದೇವಪ್ಪ ಇಬ್ಬರೂ ಕ್ಷೇತ್ರ ಬದಲಾವಣೆ ಮಾಡಿಕೊಂಡು ಮಕ್ಕಳಿಗೆ ತಮ್ಮ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಇಬ್ಬರೂ ನಾಯಕರ ಪುತ್ರರಿಗೆ ಟಿಕೆಟ್ ನೀಡಿದ್ರೆ ಇದು ಇತರೆ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂಬುದನ್ನ ಮನಗಂಡ ಹೈಕಮಾಂಡ್ ಈ ಸೂಚನೆಯನ್ನ ನೀಡಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.