ಹಾಸನ: ಆಸ್ತಿಗಾಗಿ ತಂದೆಯೇ ಮಗನ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಹೊಳೇನರಸೀಪುರ ತಾಲೂಕಿನ ಅತ್ತಿಚೌಡನಹಳ್ಳಿ ಗ್ರಾಮದ ನಿವಾಸಿ ಚಂದ್ರು ಮೃತ ದುರ್ದೈವಿ. ಸಮೀಪದ ಕರಗನಹಳ್ಳಿಯಲ್ಲಿರುವ ತೆಂಗಿನ ತೋಟದಲ್ಲಿ ತೆಂಗಿನಕಾಯಿಯನ್ನು ಕಿತ್ತಿದ್ದಕ್ಕೆ ಆಕ್ರೋಶಗೊಂಡ ಹೆತ್ತ ತಂದೆ ರಾಜಣ್ಣ ತನ್ನ ಸಂಗಡಿಗರೊಂದಿಗೆ ಸೇರಿ ಹೆತ್ತ ಮಗನನ್ನೆ ಕೊಂದು ಹಾಕಿದ್ದಾನೆ.
ಆರೋಪಿ ರಾಜಣ್ಣನಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿ ರಾಧಮ್ಮ ಮಗ ಚಂದ್ರು ಕೊಲೆಯಾದ ದುರ್ದೈವಿ. ರಾಜಣ್ಣ ಮೊದಲನೇ ಪತ್ನಿ ರಾಧಮ್ಮರನ್ನು ಬಿಟ್ಟು ಎರಡನೇ ಪತ್ನಿ ಜೊತೆ ವಾಸವಾಗಿದ್ದನು. ರಾಧಮ್ಮ ಪರಗನಹಳ್ಳಿಯಲ್ಲಿ ತನ್ನ ಮಗನ ವಾಸಿಸುತ್ತಿದ್ದರು. ಆಗ ಚಂದ್ರು ತಮ್ಮದೇ ತೋಟದಲ್ಲಿ ತೆಂಗಿನಕಾಯಿಯನ್ನು ಕೀಳಿದ್ದರು.
ಶುಕ್ರವಾರ ತೆಂಗಿನಕಾಯಿ ಕಿತ್ತಿದ್ದನ್ನು ಪ್ರಶ್ನಿಸಿದ ರಾಜಣ್ಣ ಮತ್ತು ಚಂದ್ರು ನಡುವೆ ಜಗಳ ಆರಂಭವಾಗಿದೆ. ನಂತರ ನೀವು ನನ್ನ ತಂದೆ ನೀವು ನನ್ನನ್ನು ಏನು ಬೇಕಾದರೂ ಮಾಡಬಹುದು ಎಂದು ಚಂದ್ರು ತನ್ನ ತಂದೆಗೆ ಶರಣಾಗುತ್ತಾರೆ. ಆಗ ರಾಜಣ್ಣ ತನ್ನ ಜೊತೆಯಲ್ಲಿ ಕೆಲವು ವ್ಯಕ್ತಿಗಳನ್ನು ಕರೆತಂದು ಹಿಂದಿನಿಂದ ಚಂದ್ರುವನ್ನು ಕೊಲೆ ಮಾಡುತ್ತಾನೆ. ಮೃತ ಚಂದ್ರುವಿಗೆ ಮದುವೆಯಾಗಿ ಮೂರು ಮಕ್ಕಳಿದ್ದರು ಎಂದು ಹೇಳಲಾಗಿದೆ.
ಮೊದಲೇ ಕೊಲೆಯ ಉದ್ದೇಶ ಹೊಂದಿದ್ದ ರಾಜಣ್ಣ ಕತ್ತಿಗೆ ಮಾರಕಾಯುಧಗಳಿಂದ ಕೊಚ್ಚಿ ಹಾಕಿದ್ದನ್ನು ಪ್ರತ್ಯಕ್ಷದರ್ಶಿಗಳೂ ನೋಡಿದ್ದಾರೆ. ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಈಗಾಗಲೇ ಆರೋಪಿ ರಾಜಣ್ಣ ಪೊಲೀಸರ ಮುಂದೆ ಶರಣಾಗಿದ್ದಾನೆ.