ವಿಜಯಪುರ: ಅತಂತ್ರ ಪರಿಸ್ಥಿತಿ ಬಂದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೊದಲು ನರೇಂದ್ರ ಮೋದಿ ಅವರ ಹತ್ರ ಹೋಗಿ ನಿಂತುಕೊಳ್ಳುತ್ತಾರೆ. ಇದು ನನ್ನ ಅಭಿಪ್ರಾಯವಾಗಿದ್ದು, ಅವರ ನಡುವಳಿಕೆ ನೋಡಿದ್ರೆ ನನಗೆ ಹಾಗೆ ಅನಿಸುತ್ತದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ 2018ರ ಚುನಾವಣೆಯಲ್ಲಿ 40- 50 ಸೀಟ್ ಪಡೆದು ಬಿಜೆಪಿ ಸೇರಿದ್ರೆ ಆಶ್ಚರ್ಯ ಪಡಬೇಕಿಲ್ಲ. ನನಗೆ ಸಂಶಯವಿದೆ. ಇದನ್ನು ನಾನು ತಮಾಷೆಗೆ ಹೇಳುತ್ತಿಲ್ಲ ಅಂದ್ರು.
ಸಿಎಂ ಸಿದ್ದರಾಮಯ್ಯನವರು ಒಳಗಡೆ ಏನ್ ಮಾಡೋಕು ಸಿದ್ಧವಾಗಿದ್ದಾರೆ. ಅವರಿಗೆ ಅಧಿಕಾರ ಬೇಕಾಗಿದೆ ಅಷ್ಟೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹೇಳಿದವರಿಗೆ ಟಿಕೆಟ್ ಕೊಡ್ತಾರೆ. ಸಿಎಂ ಅವರನ್ನ ಬಿಟ್ಟು ಹೈ ಕಮಾಂಡ್ ಗೆ ಟಿಕೆಟ್ ಕೊಡೋಕೆ ಆಗಲ್ಲ. ಈ ವೇಳೆ ಅವರ ಅಭಿಮಾನಿಗಳಿಗೆ ಜಾಸ್ತಿ ಟಿಕೆಟ್ ಕೊಡಿಸಿಕೊಳ್ತಾರೆ ಅಂತ ಹೇಳಿದ್ರು.
ಅತಂತ್ರ ಪರಿಸ್ಥಿತಿ ಬಂದ್ರೆ ಅವರೇ ಮೊದಲು ನರೇಂದ್ರ ಮೋದಿ ಬಳಿ ಹೋಗ್ತಾರೆ. ಅವರ ನಡುವಳಿಕೆ ನೋಡಿದ್ರೆ ನನಗೆ ಹಾಗೆ ಅನಿಸುತ್ತದೆ. 40, 50 ಸೀಟ್ ಡಿವೈಡ್ ಮಾಡ್ಕೊಂಡು ಅವರೇ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವ ವಾತಾವರಣ ನಿರ್ಮಾಣ ಮಾಡಿದ್ರೂ ಆಶ್ಚರ್ಯ ಪಡಬೇಡಿ. ಒಟ್ಟಿನಲ್ಲಿ ಕಾಂಗ್ರೆಸ್ ಗೆ ಮತ ಹಾಕುವ ಮೊದಲು ಇದನ್ನು ನಮ್ಮ ಅಲ್ಪಸಂಖ್ಯಾತರು ಸೂಕ್ಷ್ಮವಾಗಿ ಗಮನಿಸಬೇಕಿರುವುದು ಸೂಕ್ತ ಅಂತ ಹೇಳಿದ್ರು.