ಕೋಲಾರ: ಈ ಗ್ರಾಮದ ಪ್ರತಿ ಮನೆಯಲ್ಲೂ ಬಾಣಸಿಗರು ಸಿಗುತ್ತಾರೆ. ಸಸ್ಯಹಾರ, ಮಾಂಸಾಹಾರ ಎಲ್ಲಾ ತರಹದ ಅಡುಗೆಯನ್ನು ಮಾಡುತ್ತಾರೆ. ಈ ಗ್ರಾಮದವರೇ ಇವತ್ತಿನ ನಮ್ಮ ಸ್ಪೆಷಲ್ ಪಬ್ಲಿಕ್ ಹೀರೋ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮ. ಇಲ್ಲಿನ ವಿಶೇಷ ಅಂದರೆ ಗ್ರಾಮದವರೆಲ್ಲಾ ನಳ ಮಹಾರಾಜರು. ನಳಪಾಕ ಮಾಡೋದರಲ್ಲಿ ಪರಿಣತರು ಬಾಣಸಿಗ ಗ್ರಾಮ ಎಂದೇ ಪ್ರಸಿದ್ಧಿ ಪಡೆದಿದೆ. ಹಣ್ಣು, ಕಾಯಿ, ತರಕಾರಿ ಕತ್ತರಿಸುತ್ತಿರುವ ಅಡುಗೆ ಸಹಾಯಕರು, ಮಾಡಿದ ಅಡುಗೆಯ ಉಪ್ಪು ಖಾರ ಪರೀಕ್ಷೆ ಮಾಡಿ ಉಣಬಡಿಸುವ ಭಟ್ಟರು. ಇವರೆಲ್ಲಾ ದೊಡ್ಡೂರು ಗ್ರಾಮದವರು. ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲರಿಗೂ ಅಡುಗೆ ಕೆಲಸವೇ ಜೀವನಾಧಾರವಾಗಿದೆ.
ಹಲವು ವರ್ಷಗಳಿಂದ ಇದೆ ವೃತ್ತಿಯನ್ನು ಮಾಡುತ್ತಿದ್ದೇವೆ. ಸುಮಾರು 40-45 ಜನರಿದ್ದೇವೆ. ತಿಂಗಳಿಗೆ ಸುಮಾರು 15 ಆರ್ಡರ್ ಬರುತ್ತವೆ. ನಾವು ತುಂಬಾ ರುಚಿಯಾಗಿ ಮಾಡುತ್ತೇವೆ. ಬಡವರು ಶ್ರೀಮಂತರು ಎಂದು ಇಲ್ಲ ಯಾರು ಕರೆದರು ಕಡಿಮೆ ಖರ್ಚಿನಲ್ಲಿ ಅಡುಗೆ ಮಾಡಿಕೊಡುತ್ತೇವೆ ಎಂದು ಹಿರಿಯ ಬಾಣಸಿಗ ಅಮರೇಶ್ ಮತ್ತು ಅಡುಗೆ ಭಟ್ಟ ನಾಗರಾಜ್ ತಿಳಿಸಿದರು.
ಶುಭ ಸಮಾರಂಭಗಳ ಸೀಸನ್ ಬಂದರೆ ಮದುವೆ, ನಾಮಕರಣ, ಗೃಹಪ್ರವೇಶ, ವಾರ, ತಿಥಿ ಎಲ್ಲಾ ಕಾರ್ಯಗಳಿಗೂ ಇವರು ಬೇಕಾದ ರೀತಿ ಸಸ್ಯಹಾರ ಮತ್ತು ಮಾಂಸಾಹಾರವನ್ನು ಮಾಡುತ್ತಾರೆ ಎಂದು ಅಡುಗೆ ಗುತ್ತಿಗೆ ನೀಡಿದ ಮಹೇಶ್ ಹೇಳುತ್ತಾರೆ.
ಇವರು ತಮ್ಮ ಮಕ್ಕಳಿಗೂ ಇದೇ ವೃತ್ತಿಯನ್ನು ಹೇಳಿಕೊಡುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ರಜೆ ಇದ್ದಾಗ ಹುಡುಗರೆಲ್ಲಾ ಬಂದು ಪಾರ್ಟ್ ಟೈಮ್ ಜಾಬ್ ಮಾಡುತ್ತಿದ್ದಾರೆ. ಕರ್ನಾಟಕ ಮಾತ್ರ ಅಲ್ಲದೇ ಆಂಧ್ರ ಪ್ರದೇಶ, ತಮಿಳುನಾಡು, ರಾಜ್ಯದ ನಾನಾ ಭಾಗಗಳಲ್ಲಿ ಅಡುಗೆ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ.