ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ ಬಲ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ವೇದಿಕೆ ಸಿದ್ಧವಾಗಿದ್ದು, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯ ಮಾಡಲಿದ್ದಾರೆ. ವಾಣಿಜ್ಯ ನಗರಿಯಾದ ಹುಬ್ಬಳ್ಳಿ ನಾಳೆ ಲಿಂಗಾಯತರ ಶಕ್ತಿ ಪ್ರದರ್ಶನದ ಕೇಂದ್ರವಾಗಲಿದೆ.
ಸಾಕಷ್ಟು ಪರ-ವಿರೋಧದ ಚರ್ಚೆಗಳ ನಡುವೆಯೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮತ್ತೆ ರಣಕಹಳೆ ಮೊಳಗಿದೆ. ನೆಹರು ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಸಕಲ ತಯಾರಿ ನಡೆದಿದ್ದು, ಸುಮಾರು 5 ಲಕ್ಷ ಮಂದಿ ಈ ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಬೃಹತ್ ಸಮಾವೇಶದಲ್ಲಿ ತೋಂಟದಾರ್ಯ ಶ್ರೀಗಳು, ಮುರುಘಾ ಶ್ರೀಗಳು, ಮಾತೆ ಮಹಾದೇವಿ ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮಸಾಲಿ ಪೀಠ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ತಿಳಿದ್ದಾರೆ.
ಇನ್ನು ಈ ಸಮಾವೇಶಕ್ಕೆ ಬಿಜೆಪಿಯ ಜಗದೀಶ್ ಶೆಟ್ಟರ್ಗೆ ಬಸವರಾಜ ಹೊರಟ್ಟಿ ಆಹ್ವಾನ ನೀಡಿದ್ದಾರೆ. ಆದರೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ನಿರಾವರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಲಿಂಗಾಯತ ಸಮುದಾಯ ಹರಿದು ಬರುತ್ತಿದೆ. ಇವರಿಗೆಲ್ಲಾ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಇದನ್ನೆಲ್ಲ ಮಾಡುತ್ತಿರುವುದು ಹುಬ್ಬಳ್ಳಿಯ ಜೈನ ಮತ್ತು ಮುಸ್ಲಿಂ ಬಾಂಧವರು. ಎಂದಿನಂತೆ ಪೊಲೀಸ್ ಇಲಾಖೆಯು ಬಿಗಿ ಭದ್ರತೆಯನ್ನು ಕೈಗೊಂಡಿದೆ.