ವಿಜಯಪುರ: ಇಲ್ಲಿನ ಗೊಳಸಂಗಿ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣವನ್ನ ಕೂಡಗಿ ಪೊಲೀಸರು (Kudgi Police) ಯಶಸ್ವಿಯಾಗಿ ಭೇದಿಸಿದ್ದಾರೆ.
ಕೇವಲ 8 ನಿಮಿಷದಲ್ಲಿ ಬರೋಬ್ಬರಿ 19.29 ಲಕ್ಷ ರೂಪಾಯಿ ದೋಚಿ (ATM Money Theft) ಪರಾರಿಯಾಗಿದ್ದ ಹರಿಯಾಣ ಮೂಲದ ಅಂತರರಾಜ್ಯ ಕಳ್ಳರ ಗ್ಯಾಂಗ್ ಅನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಕಳೆದ ಸೆಪ್ಟೆಂಬರ್ 2ರಂದು ವಿಜಯಪುರ ಜಿಲ್ಲೆ ಕೂಡಗಿ ಠಾಣಾ ವ್ಯಾಪ್ತಿಯ ಗೊಳಸಂಗಿಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಟಾರ್ಗೆಟ್ ಮಾಡಿದ್ದ ಹರಿಯಾಣ ಗ್ಯಾಂಗ್, ಕೇವಲ 8 ನಿಮಿಷಗಳಲ್ಲಿ ಎಟಿಎಂ ಕ್ಯಾಶ್ ಬಾಕ್ಸ್ ಸಮೇತ ಬರೋಬ್ಬರಿ 19.29 ಲಕ್ಷ ರೂಪಾಯಿ ಕದ್ದು ಎಸ್ಕೇಪ್ ಆಗಿತ್ತು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು ಮಧ್ಯಪ್ರದೇಶದ ಕನ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಅಂತರ ರಾಜ್ಯ ಎಟಿಎಂ ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ.

24 ವರ್ಷದ ಸಾಹಿಲ್ ಮಹಮೂದ್, 50 ವರ್ಷದ ಕಮರಿಯಾಬ್ ಸತ್ತಾರ್ ಮತ್ತು 27 ವರ್ಷದ ಆಕಾಶ್ ತ್ಯಾಗಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 19.20 ಲಕ್ಷ ನಗದು, 5 ಎಟಿಎಂ ಕ್ಯಾಶ್ ಬಾಕ್ಸ್, ಗ್ಯಾಸ್ ಕಟರ್ ಸೇರಿದಂತೆ ಕೃತ್ಯಕ್ಕೆ ಬಳಕೆ ಮಾಡಿದ್ದ ಬ್ಲಾಕ್ ಸ್ಕಾರ್ಪಿಯೋ ಕಾರನ್ನ ಜಪ್ತಿ ಮಾಡಿದ್ದಾರೆ.
ಗೂಗಲ್ ಮ್ಯಾಪ್ ನೋಡಿ ಹೈವೇ ಪಕ್ಕದ ಎಟಿಎಂಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳರ ಜಾಲವನ್ನ ಮಟ್ಟಹಾಕುವಲ್ಲಿ ಕೂಡಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

