ಬೆಂಗಳೂರು: ಕಸದ ಟೆಂಡರ್ನಲ್ಲಿ ಭಾರಿ ಗೋಲ್ಮಾಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಟೆಂಡರ್ ಪರಿಶೀಲಿಸುತ್ತಿರುವ ಅಧಿಕಾರಿಗಳ ಸಮಿತಿಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಬೆಂಗಳೂರು ನಗರದ ಭವಿಷ್ಯ, ಅದರ ಆರ್ಥಿಕ ಸ್ಥಿರತೆ ಹಾಗೂ ಕೋಟ್ಯಂತರ ನಾಗರಿಕರ ಹಿತಾಸಕ್ತಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯವನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನಿಮ್ಮನ್ನು ಉನ್ನತ ಮಟ್ಟದ ಸಮಿತಿಗೆ ನೇಮಿಸಿದೆ. ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ. ನೀವು ಈ ನಗರದ ನಾಗರಿಕರು, ತೆರಿಗೆ ಪಾವತಿಸುವವರು, ಬೆಂಗಳೂರಿನ ಪ್ರಗತಿಯ ಪಾಲುದಾರರು ಮತ್ತು ಹಕ್ಕುದಾರರು. ನಿಮ್ಮ ಕುಟುಂಬಗಳು ಮತ್ತು ಮಕ್ಕಳ ಭವಿಷ್ಯವೂ ಇದೇ ನಗರದ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ, ನಿಮ್ಮ ಮುಂದೆ ಇರುವ ಪ್ರಶ್ನೆ ಕೇವಲ ಒಂದು ಟೆಂಡರ್ ಕಡತದ ಪ್ರಶ್ನೆಯಲ್ಲ. ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಜನರ ಹಣ, ನಗರದ ಆಡಳಿತ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಾಗಿದೆ. ಇದನ್ನೂ ಓದಿ: ಕಸ ಸಂಸ್ಕರಣೆ ನೆಪದಲ್ಲಿ 39,000 ಕೋಟಿ ಹಗರಣ – 10,000 ಕೋಟಿ ಕಿಕ್ಬ್ಯಾಕ್: ಆರ್.ಅಶೋಕ್ ಬಾಂಬ್
ರಾಜ್ಯದ ಹಣಕಾಸು ಇಲಾಖೆಯೇ ಈ ಟೆಂಡರ್ ಕುರಿತು ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿದೆ. ಯೋಜನೆಯ ವೆಚ್ಚ, ವಾರ್ಷಿಕ ದರ ಏರಿಕೆ, 30 ವರ್ಷಗಳ ಸುದೀರ್ಘ ಅವಧಿಯ ಒಪ್ಪಂದ ಹಾಗೂ ಏಕಸ್ವಾಮ್ಯಕ್ಕೆ ಅವಕಾಶ ಕಲ್ಪಿಸುವ ʼವೆಂಡರ್ ಲಾಕ್-ಇನ್ʼ ಅಪಾಯಗಳ ಬಗ್ಗೆ ಸರ್ಕಾರದ ಸ್ವಂತ ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ. ಹಣಕಾಸು ಇಲಾಖೆಯ ಅಭಿಪ್ರಾಯದ ಪ್ರಕಾರ, ವರ್ಷಕ್ಕೆ 5% ದರ ಏರಿಕೆ ಮುಂದುವರಿದರೆ ಮುಂದಿನ 30 ವರ್ಷಗಳಲ್ಲಿ ಈ ಯೋಜನೆಯ ವೆಚ್ಚ ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಅಂತಿಮ ಹೊರೆ ಬೀಳುವುದು ಸರ್ಕಾರದ ಮೇಲೆ ಅಲ್ಲ, ಬೆಂಗಳೂರಿನ ತೆರಿಗೆದಾರ ನಾಗರಿಕರ ಮೇಲೆ.
ಈಗಾಗಲೇ ಬೆಂಗಳೂರು ನಗರದ ಜನರು ಆಸ್ತಿ ತೆರಿಗೆ, ವಿವಿಧ ಸೆಸ್ಗಳು, ಬಳಕೆದಾರರ ಶುಲ್ಕಗಳು ಹಾಗೂ ಇತರೆ ತೆರಿಗೆಗಳ ಭಾರವನ್ನು ಹೊರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ಸಾವಿರಾರು ಕೋಟಿ ರೂಪಾಯಿಗಳ ಬಳಕೆಯ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅತ್ಯಂತ ಜವಾಬ್ದಾರಿಯುತವಾಗಿರಬೇಕು. ನಿಮ್ಮ ಸಮಿತಿಯ ವರದಿ ಕೇವಲ ಸರ್ಕಾರಕ್ಕೆ ಸಲ್ಲಿಸುವ ಒಂದು ದಾಖಲೆಯಾಗಿರುವುದಿಲ್ಲ. ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುವ ನಿರ್ಧಾರದ ಅಡಿಪಾಯವಾಗಲಿದೆ. ವರದಿಯಲ್ಲಿ ನೀವು ಬರೆಯುವ ಪ್ರತಿಯೊಂದು ಪದವೂ ಸಾರ್ವಜನಿಕ ವಲಯದಲ್ಲಿ ಮಾಧ್ಯಮಗಳಲ್ಲಿ ತೀವ್ರ ವಿಮರ್ಶೆಗೊಳಗಾಗಲಿದೆ.
ಆದ್ದರಿಂದ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಇತರ ಒತ್ತಡಗಳಿಗೆ ಮಣಿಯದೆ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಮಾತ್ರ ಮಾನದಂಡವನ್ನಾಗಿಸಿಕೊಂಡು ಸಂಪೂರ್ಣ ಪಾರದರ್ಶಕ, ಪ್ರಾಮಾಣಿಕ ಹಾಗೂ ನಿರ್ಭೀತ ವರದಿಯನ್ನು ಸಲ್ಲಿಸುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ. ಸರ್ಕಾರಕ್ಕೆ ವರದಿ ಸಲ್ಲಿಸುವುದು ತಮಗೆ ಒಂದು ಕರ್ತವ್ಯವಾಗಿರಬಹುದು. ಆದರೆ ಬೆಂಗಳೂರಿನ ಜನತೆಗೆ ಮತ್ತು ನಿಮ್ಮ ಆತ್ಮಸಾಕ್ಷಿಗೆ ಉತ್ತರ ನೀಡುವುದು ಅದಕ್ಕಿಂತ ದೊಡ್ಡ ಜವಾಬ್ದಾರಿಯಾಗಿದೆ. ಇದನ್ನೂ ಓದಿ: ಅಶೋಕ್ ಕಸ ಮಾಫಿಯಾ ಗ್ಯಾಂಗ್ನ ಏಜೆಂಟ್ ಆಗಿ ಮಾತನಾಡ್ತಿದ್ದಾರೆ: ಸಿಎಂ ಡಿಕೆಶಿ
ನಾಳೆ ಈ ನಗರದ ನಾಗರಿಕರು. ತೆರಿಗೆದಾರರು ಮತ್ತು ಮುಂದಿನ ಪೀಳಿಗೆಗಳು ಹಿಂದಿರುಗಿ ನೋಡಿದಾಗ, ಈ ಸಮಿತಿಯ ಸದಸ್ಯರು ಕೇವಲ ಒಂದು ನಿರ್ಧಾರಕ್ಕೆ ಮುದ್ರೆ ಒತ್ತಲಿಲ್ಲ. ಬೆಂಗಳೂರಿನ ಹಿತಾಸಕ್ತಿಯನ್ನು ಕಾಪಾಡುವ ತಮ್ಮ ಗುರುತರ ಕರ್ತವ್ಯವನ್ನು ನಿಭಾಯಿಸಿದರು ಎಂಬ ಹೆಗ್ಗಳಿಕೆ ನಿಮಗೆ ಸಲ್ಲಲಿ ಎಂಬುದು ನನ್ನ ಆಶಯ. ಬೆಂಗಳೂರು ನಗರದ ಜನರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಅವಕಾಶ ಇಂದು ನಿಮ್ಮ ಮುಂದಿದೆ. ನಿಮ್ಮ ವರದಿ ಸರ್ಕಾರದ ನಿರ್ಧಾರವನ್ನು ಮಾತ್ರವಲ್ಲ, ಬೆಂಗಳೂರಿನ ಭವಿಷ್ಯವನ್ನೂ ರೂಪಿಸಲಿದೆ. ಆ ಜವಾಬ್ದಾರಿಯನ್ನು ನ್ಯಾಯಯುತವಾಗಿ ನಿರ್ವಹಿಸುವಿರಿ ಎಂಬ ದೃಢ ವಿಶ್ವಾಸ ನನ್ನದು ಎಂದು ಅಧಿಕಾರಿಗಳ ಸಮಿತಿಗೆ ಆರ್.ಅಶೋಕ್ ಪತ್ರ ಬರೆದಿದ್ದಾರೆ.
