– ಬಂಧನಕ್ಕೆ ಬಿಜೆಪಿ ವಿರೋಧ
ಚೆನ್ನೈ: ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮಿಳುನಾಡು (Tamil Nadu) ಮುಖ್ಯಮಂತ್ರಿ ವಿಜಯ್ (CM Vijay) ಮತ್ತು ಕೆಲವು ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬರ್ ಮರಿದಾಸ್ (YouTuber Maridhas) ಅವರನ್ನು ಗ್ರೇಟರ್ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಮರಿದಾಸ್ ನಿರಂತರವಾಗಿ ಆರೋಪ ಮತ್ತು ಟೀಕೆ ಮಾಡುತ್ತಿದ್ದರು. ಈ ಸಂಬಂಧ ಚೆನ್ನೈನ ಸೈಬರ್ ಕ್ರೈಮ್ ಪೊಲೀಸರ ವಿಭಾಗ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದರು. ಮಧುರೈ ನಗರ ಪೊಲೀಸರ ಸಹಾಯದಿಂದ ಅವರನ್ನು ಸೂರ್ಯ ನಗರದ ಅವರ ನಿವಾಸದಲ್ಲಿ ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಚೆನ್ನೈಗೆ ಕರೆತರಲಾಗುತ್ತಿದೆ. ಇದನ್ನೂ ಓದಿ: TVKಯ ಮೊದಲ ರಾಜ್ಯಸಭಾ ಸ್ಥಾನ ಕಾಂಗ್ರೆಸ್ ಪಾಲು

ವಿಚಾರಣೆಗಾಗಿ ಮರಿದಾಸ್ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಯಾವ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದರ ಬಗ್ಗೆ ಮುಂದಿನ ಹಂತದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿವಿಕೆ ಸಚಿವರಾದ ಕೀರ್ತನಾ ಸೇರಿ ಹಲವು ಸಚಿವರು ಮತ್ತು ಶಾಸಕರ ವಿರುದ್ಧ ಅವರು ಚುನಾವಣೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮರಿದಾಸ್ ಆರೋಪಿಸಿದ್ದರು. ಅಲ್ಲದೇ ಈ ಹಿಂದೆ ಡಿಎಂಕೆ ಅಧಿಕಾರವಧಿಯಲ್ಲೂ ತಮ್ಮ ರಾಜಕೀಯ ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾಗಿದ್ದರು. ಹಿಂದೆಯೂ ಹಲವಾರು ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದಾರೆ.
ಯೂಟ್ಯೂಬರ್ ಬಂಧನಕ್ಕೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಸಿಎಂ ವಿಜಯ್ ರಾಜೀನಾಮೆ ಕೊಟ್ಟ ತಿರುಚ್ಚಿ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧೆ?
