- ಪೊಲೀಸರು ಜಪ್ತಿ ಮಾಡಿದಾಗ ಮನೆಯಲ್ಲೇ ಇದ್ದ ಮಟ್ಟಣ್ಣನವರ್
ಬೆಂಗಳೂರು: ಸಮೀರ್ ಎಂಡಿ (Sameerr MD) ವಿಡಿಯೋದಲ್ಲಿ ಬಳಕೆ ಮಾಡಿದ್ದ ಒಂದು ಪದಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಮನೆಗೆ ಆಗಮಿಸಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಗಿರೀಶ್ ಮಟ್ಟಣ್ಣನವರ್ (Girish Mattannavar) ತಿಳಿಸಿದ್ದಾರೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಲ್ಲಿಯಲ್ಲಿರುವ ಬಾಡಿಗೆ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಪೊಲೀಸರ ಜೊತೆ ವಿಧಿ ವಿಜ್ಞಾನ ಪ್ರಯೋಗಾಲಯದ ಸೋಕೊ ಸಿಬ್ಬಂದಿಯೂ ಇದ್ದು ಸಮೀರ್ ವಿಡಿಯೋ ಮಾಡುತ್ತಿದ್ದ ಸ್ಥಳವನ್ನು ಮಹಜರು ಮಾಡಿದರು.
ಮಹಜರು ಪ್ರಕ್ರಿಯೆ ನಡೆದ ಬಳಿಕ ಇಂದು ಬೆಳಗ್ಗೆಯಿಂದಲೇ ಸಮೀರ್ ಮನೆಯಲ್ಲಿದ್ದ ಮಟ್ಟಣ್ಣನವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸೌಜನ್ಯ ಕೇಸ್ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳಲಿಲ್ಲ: ಉದಯ್ ಜೈನ್
ಸಮೀರ್ ಮನೆಯ ಮೇಲೆ ಯಾವುದೇ ರೀತಿಯ ದಾಳಿ ನಡೆದಿಲ್ಲ. ಧರ್ಮಸ್ಥಳಕ್ಕೆ ಅಪಪ್ರಚಾರ ನಡೆಸಿದ್ದಕ್ಕೆ ದಾಖಲಾದ ಕೇಸ್ ಅಲ್ಲ. ಧರ್ಮಸ್ಥಳ ಠಾಣೆಯಲ್ಲಿ ಸಮೀರ್ ಮೇಲೆ ಒಂದು ಕೇಸ್ ದಾಖಲಾಗಿತ್ತು. ಸಮೀರ್ ವಿಡಿಯೋದಲ್ಲಿ ಬೆಳ್ತಂಗಡಿ ಪೊಲೀಸರನ್ನು ಧಣಿಗಳ ಚಾಟು ಎಂದು ಹೇಳಿದ್ದರು. ಈ ಪದ ಬಳಕೆ ಮಾಡಿದ್ದಕ್ಕೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಸ್ಥಳ ಮಹಜರು ಮಾಡಿದ್ದಾರೆ ಎಂದು ತಿಳಿಸಿದರು.
ವಿಧಿವಿಜ್ಞಾನ ಪ್ರಾಯೋಗಾಲಯದವರು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಆನೆ ಮಾವುತನ ಕೊಲೆಯಾದಾಗ, ಸೌಜನ್ಯ ಕೊಲೆಯಾದಾಗ ಈ ರೀತಿಯ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಪೊಲೀಸರು ಪ್ರಕರಣಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಫುಲ್ ಗ್ರಿಲ್ – ಲೈಕ್ಸ್, ವ್ಯೂವ್ಸ್ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ
ಇಂದು ಸಮೀರ್ ಅವರ ಮೊಬೈಲ್, ಕ್ಯಾಮೆರಾ, ಕಂಪ್ಯೂಟರ್ ಜಪ್ತಿ ಮಾಡಿದ್ದಾರೆ. ಸಮೀರ್ ಎಂಡಿ ಮೇಲೆ ಸುಳ್ಳು ಕೇಸ್ ದಾಖಲಾಗಿದ್ದು ಅವರು ಸಹಕಾರ ನೀಡಿದ್ದಾರೆ. ಎಐ ವೀಡಿಯೋದಲ್ಲಿ ಬಂದಿರುವುದು ಸತ್ಯದ ಮಾಹಿತಿ, ಯಾವುದೂ ಸುಳ್ಳಿಲ್ಲ. ಸಮೀರ್ ನನ್ನ ಸ್ನೇಹಿತನಾಗಿದ್ದು ಪಂಚನಾಮೆಗೆ ಅವಶ್ಯಕತೆ ಇರಬಹುದು ಎಂಬ ಕಾರಣಕ್ಕೆ ನಾನು ಬಂದಿದ್ದೇನೆ. ಸಮೀರ್ ಜೊತೆ ನಾವು ಯಾವಾಗಲೂ ಇರುತ್ತೇವೆ ಎಂದು ಹೇಳಿದರು.