– ಎಸ್ಎಸ್ಎಲ್ಸಿಯಲ್ಲಿ 94% ಅಂಕ ಪಡೆದಿದ್ದ ವಿದ್ಯಾರ್ಥಿನಿ
– ಮನೆಗೆ ಅಧಿಕಾರಿಗಳ ಭೇಟಿ, ಶಿಕ್ಷಣಕ್ಕೆ ಸಹಾಯ
ಬಳ್ಳಾರಿ: ಪೋಷಕರ ನಿರ್ಧಾರಕ್ಕೆ ಸೆಡ್ಡು ಹೊಡೆದು ಬಾಲಕಿಯೇ ತನ್ನ ಬಾಲ್ಯ ವಿವಾಹವನ್ನು ನಿಲ್ಲಿಸಿದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ಪೋಷಕರು ವಿವಾಹ ಮಾಡುತ್ತಿರುವ ವಿಚಾರ ಗೊತ್ತಾಗಿ ಬಾಲಕಿಯೇ ಧೈರ್ಯ ಮಾಡಿ ತನ್ನ ಮದುವೆ ನಿಲ್ಲಿಸಿ ಎಂದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಳು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬಂದ ತಹಶೀಲ್ದಾರ್, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮದುವೆಗೆ ಬ್ರೇಕ್ ಹಾಕಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ 94% ಅಂಕ ಪಡೆದಿದ್ದ ಬಾಲಕಿ ಉನ್ನತ ವ್ಯಾಸಂಗದ ಕನಸು ಕಂಡಿದ್ದಳು. ಆದರೆ ಪೋಷಕರು ಮದುವೆ ಮಾಡಿ ಕೈ ತೊಳೆದುಕೊಳ್ಳಲು ಯೋಚನೆ ಮಾಡಿದ್ದರು. ಹುಡುಗನನ್ನು ನೋಡಿ ಇನ್ನೇನು ಒಂದು ತಿಂಗಳೊಳಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದರು. ಇದನ್ನೂ ಓದಿ: ಟೀಚರ್ ಮೇಲೆ ಸಿಕ್ಕಾಪಟ್ಟೆ ಲವ್ – ದೂರು ನೀಡಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ
ತನ್ನ ಮದುವೆಯಾಗಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಆಕೆ ಧೈರ್ಯ ಮಾಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ತಕ್ಷಣ ಎಚ್ಚೆತ್ತ ಹಗರಿಬೊಮ್ಮನಹಳ್ಳಿಯ ತಾಲೂಕು ಆಡಳಿತ ಬಾಲಕಿ ಮನೆಗೆ ದೌಡಾಯಿಸಿದ್ದಾರೆ.
ಪೋಷಕರಿಗೆ ಬುದ್ಧಿ ಹೇಳುವ ಮೂಲಕ ಅಧಿಕಾರಿಗಳು ಬಾಲಕಿಗೆ ಕಾಲೇಜೊಂದರಲ್ಲಿ ಸೀಟ್ ಕೊಡಿಸಿ ಹಾಸ್ಟೆಲ್ ವ್ಯವಸ್ಥೆ ಮಾಡಿದ್ದಾರೆ. ಬಾಲಕಿಯ ದಿಟ್ಟ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.