ಬೆಂಗಳೂರು: ಕನ್ನಡ ಭಾವಗೀತೆಗಳ ಭವ್ಯ ಪರಂಪರೆಯ ಪ್ರತಿನಿಧಿ ಡಾ. ಹೆಚ್ಎಸ್ ವೆಂಕಟೇಶಮೂರ್ತಿ (HS Venkatesh Murty) ಅವರ ನಿಧನ ಕನ್ನಡ ಕಾವ್ಯ ಲೋಕಕ್ಕೆ ಅತಿ ದೊಡ್ಡ ಆಘಾತ ತಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಮುಂಜಾನೆ ಡಾ.ಹೆಸ್ಎಸ್ವಿ ಅವರ ನಿಧನದ ಸುದ್ದಿ ಬಂದ ಕೂಡಲೇ ದಿಗ್ಭ್ರಮೆ ಆಯಿತು. ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಗೆ ಹೊಸ ಭಾಷ್ಯ ಬರೆದ ಕವಿ ಹೆಚ್ಎಸ್ವಿ ಅವರು. ಸದಾ ನಮ್ಮ ಕಿವಿಗಳಲ್ಲಿ ಅನುರಣಿಸುವ ಅವರ ಗೀತೆಗಳ ಸೊಗಸು ಅನನ್ಯವಾದದ್ದು. ತೂಗು ಮಂಚದಲ್ಲಿ, ಅಮ್ಮ ನಾನು ದೇವರಾಣೆ, ಲೋಕದ ಕಣ್ಣಿಗೆ ರಾಧೆಯು ಕೂಡ, ಹುಚ್ಚು ಕೋಡಿ ಮನಸು, ಇಂತಹ ಯಾವುದೇ ಗೀತೆಗಳು ನಮ್ಮನ್ನು ಬೇರೊಂದು ಲೋಕದ ಭಾವಲಹರಿಗೆ ಕೊಂಡೊಯ್ಯುತ್ತವೆ ಎಂದರು.ಇದನ್ನೂ ಓದಿ:ಕನ್ನಡದ ಖ್ಯಾತ ಕವಿ ಹೆಚ್.ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ
ಇಂತಹ ಗೀತೆಗಳನ್ನು ಕೊಟ್ಟ ಕವಿ ನಮ್ಮನ್ನು ಇಂದು ಅಗಲಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಡಾ.ಹೆಚ್ಎಸ್ವಿ ಬರೀ ಕವಿಯಾಗಿಯಲ್ಲ, ನಾಟಕಕಾರರಾಗಿ, ಅಂಕಣಕಾರರಾಗಿ, ಅನುವಾದ, ಶಿಶು ಸಾಹಿತ್ಯ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮ ಅನನ್ಯ ಕೊಡುಗೆ ಕೊಟ್ಟಿದ್ದಾರೆ. ಬುದ್ಧ ಚರಣ ಮಹಾಕಾವ್ಯದ ಮೂಲಕ ಅವರು ಸಾಹಿತ್ಯದ ಮತ್ತೊಂದು ಮಜಲನ್ನು ಸ್ಪರ್ಶಿಸಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಅದರಲ್ಲಿಯೂ ವಿಶೇಷವಾಗಿ ಭಾವಗೀತೆಗಳ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಅದ್ಭುತವಾದದ್ದು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ನೂರಾರು ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದ ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಮಹತ್ವದ ಚೇತನವೊಂದನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.ಇದನ್ನೂ ಓದಿ: ನ್ಯೂಯಾರ್ಕ್ನ ಸೆಂಟ್ರಲ್ ಪಾರ್ಕ್ನಲ್ಲಿ ಅಣ್ಣಾವ್ರ ಮೊಮ್ಮಕ್ಕಳು