– ಹಾಲುಮತ ಸಮಾಜದಿಂದ ಅಧಿಕಾರವನ್ನು ಸುಲಭವಾಗಿ ಕಿತ್ತುಕೊಳ್ಳಲು ಸಾಧ್ಯವಿಲ್ಲ
ಗದಗ: ಸಿದ್ದರಾಮಯ್ಯ (Siddaramaiah) ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ. ಹಾಲುಮತ (Halumatha) ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಗದಗನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಹೇಳಿದ್ದು ಕೇವಲ ವ್ಯಕ್ತಿಯ ಚಿಂತನೆ ಅಲ್ಲ, ಸಮಗ್ರ ಭವಿಷ್ಯದ ಚಿಂತನೆ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದವರು ಹಕ್ಕಬುಕ್ಕರು. ಇವತ್ತಿಗೂ ವಿಜಯನಗರ ಸಾಮ್ರಾಜ್ಯದ ಹೆಸರು ಚಿರಸ್ಥಾಯಿಯಾಗಿದೆ. ಆ ಸಾಮ್ರಾಜ್ಯ ಕೊಡುಗೆ, ನೆನಪು, ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದ ಅರಸರುಗಳ ಕೊಡುಗೆ ಅಪಾರ. ಹಕ್ಕ-ಬುಕ್ಕರು ಹಾಲುಮತ ಸಮಾಜದವರು. ಆ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.
Advertisement
ಸಮಾಜದ ಮೇಲೆ, ರಾಜ್ಯದ ಮೇಲೆ ಒಳ್ಳೆ ಕೆಲಸ ಮಾಡುವ ಜನರಿಗೆ ಕೆಡುಕು ಆಗುವುದು ಕಷ್ಟ. ಆ ದೃಷ್ಟಿಯಿಂದ ಹಾಲುಮತ ಸಮಾಜದ ಸಿದ್ದರಾಮಯ್ಯನವರು ರಾಜ್ಯದ ಅಧಿಕಾರದಲ್ಲಿ ಇದ್ದಾರೆ. ಅವರಿಂದ ಅಧಿಕಾರ ಕಿತ್ತುಕೊಳ್ಳೋದು ಕಷ್ಟ. ವಿಜಯನಗರ ಸಾಮ್ರಾಜ್ಯದ ಉದಾಹರಣೆ ಇಟ್ಟು ಸಾಮಾನ್ಯ ಭವಿಷ್ಯ ಜ್ಞಾನವನ್ನ ಹೇಳಿದ್ದೇನೆ. ಬೇರೆಯವರು ಅದನ್ನೆಲ್ಲಾ ಮಾಡಿಲ್ಲ ಅಂತಾ ಅಲ್ಲ. ಬೇರೆ ಸಮಾಜದವರೂ ಮಾಡಿದ್ದಾರೆ. ಆ ಸಮಾಜದ ಬಗ್ಗೆ ನಮಗೆ ಬೇರೆ ಅಭಿಪ್ರಾಯ ಇಲ್ಲ ಎಂದು ಹೇಳಿದರು.
Advertisement
Advertisement
ಸಿದ್ದರಾಮಯ್ಯ 5 ವರ್ಷ ಆಳಿದ್ದಾರೆ. ಯಾರೂ ಅವರ ಸ್ಥಾನ ಕಿತ್ತುಕೊಳ್ಳಲು ಆಗಲಿಲ್ಲ. ಅಲ್ಲಾಳರೊಂಭತ್ತು ಪಟ್ಟ, ಗೊಲ್ಲಾಳರೊಂಭತ್ತು ಪಟ್ಟ. ಅಲ್ಲಾಳ, ಗೊಲ್ಲಾಳ, ಬಲ್ಲಾಳ ಅಂತಾ ಕರೆಯುತ್ತಾರೆ. ಅಲ್ಲಾಳರಾದ ಮಹಮ್ಮದೀಯರು ಈ ದೇಶವನ್ನು 9 ಪಟ್ಟ ಆಳಿದರು. ಬಲ್ಲಾಳರು ಅಂದ್ರೆ ಪಾಳೇಗಾರರು, ಪಾಳೆ ಪಟ್ಟುಗಳು ಎಲ್ಲರೂ 9 ಪಟ್ಟ ಆಳಿದರು. ಗೊಲ್ಲಾಳರು ಅಂದ್ರೆ ಯದು ವಂಶಸ್ಥರು. ಮೈಸೂರು ಒಡೆಯರು ಇವರೂ 9 ಪಟ್ಟ ಆಳಿದರು. ನಂತರ ಪ್ರಜಾಪ್ರಭುತ್ವದ ಪಟ್ಟ ಬಂತು ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಮೂಲದ ಭಯೋತ್ಪಾದಕರ 1.8 ಎಕ್ರೆ ಜಾಗ ಮುಟ್ಟುಗೋಲು
Advertisement
ಇವತ್ತಿನ ರಾಜಕೀಯ ಚಿಂತನೆ ಮಾಡುವುದಾದರೆ ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ. ಅವರಿಗೆ ಸಾಮಾಜಿಕ, ಧಾರ್ಮಿಕ ಹಿನ್ನೆಲೆ ದೃಷ್ಟಿಯಿಂದ ಹೇಳಿದ್ದೇವೆ ಹೊರತು ಡಿಕೆಶಿ ಬಗ್ಗೆ, ವೀರಪ್ಪ ಮೊಯ್ಲಿ ಬಗ್ಗೆ ಒಳ್ಳೆ ಅಭಿಪ್ರಾಯವಿದ್ದು ನಮಗೆ ಅವರೂ ಬೇಕಾದವರು ಎಂದರು.
ನಮ್ಮ ಭಾರತೀಯ ಪರಂಪರೆಯಲ್ಲಿ ಸಂಕ್ರಾಂತಿ ಭವಿಷ್ಯ ಹಾಗೂ ಯುಗಾದಿ ಭವಿಷ್ಯ ಅಂತಾರೆ. ಚಂದ್ರನನ್ನು ಆಧಾರವಾಗಿಟ್ಟುಕೊಂಡು ಯುಗಾದಿ ಮೇಲೆ ಮಳೆ, ಬೆಳೆ, ಧಾನ್ಯಗಳು, ರಾಜರ ಬದಲಾವಣೆ, ಯುದ್ಧ ಭೂಮಿ ಎಲ್ಲಾ ಹೇಳ್ತಾರೆ. ಆವಾಗ ಅದನ್ನು ನೋಡಿಕೊಳ್ಳಬೇಕು ಅಂತಾ ನಾನು ಹೇಳಿದ್ದೇನೆ. ಒಕ್ಕಲಿಗರು ಅಂದರೆ ಅನ್ನದಾತರು ಎಂದರ್ಥ ಅವರನ್ನ ಜಗತ್ತೇ ಮರೆಯೋದಿಲ್ಲ. ಇದಕ್ಕೆ ಜಾತಿ ಲೇಪನ ಹಚ್ಚೋದು ಬೇಡ ಒಕ್ಕಲಿಗ ಸಮಾಜಕ್ಕೆ ಜಗತ್ತೇ ಬಾಗಬೇಕು ಎದು ಹೇಳಿದರು.
ರಾಷ್ಟ ರಾಜಕಾರಣದಲ್ಲಿ ಸುನಾಮಿ ಆಗುತ್ತದೆ. ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸುನಾಮಿಯಾಗುವ ಲಕ್ಷಣಗಳು ಬಹಳ ಇದ್ದಾವೆ. ರಾಜ್ಯಕ್ಕೆ ಮಳೆ, ಬೆಳೆ ಕೊರತೆ ಇಲ್ಲ. ಆದ್ರೆ ಪ್ರಕೃತಿ ದೋಷಗಳು, ಹಿಮಪಾತ, ಭೂಕಂಪ, ಸುನಾಮಿಗಳಂತಹ ಘಟನೆಗಳು ನಡೆಯುತ್ತವೆ ಎಂದರು.
ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತಾರಾ ಎಂಬ ಪ್ರಶ್ನೆಗೆ, ನಾನು ಊರಿಗೆ ಹೋಗಬೇಕಪ್ಪ ಇಲ್ಲಿಂದ ಎಂದು ತಿಳಿಸಿ ತೆರಳಿದರು.