ಚಿಕ್ಕೋಡಿ: ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ವಕ್ಫ್ ಜಮೀನು ವಿವಾದ (Waqf Property Dispute), ಇದೀಗ ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ಜಮೀನಿನವರೆಗೂ ತಲುಪಿದೆ.
ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ (Shashikala Jolle) ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ಪುತ್ರ ಬಸವ ಪ್ರಸಾದ್ ಜೊಲ್ಲೆ ಮಾಲೀಕತ್ವದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಯಕ್ಸಂಬಾ ಪಟ್ಟಣದಲ್ಲಿರುವ ಜೊಲ್ಲೆ ಮಾಲೀಕತ್ವದ 3 ಎಕರೆಗಿಂತಲೂ ಹೆಚ್ಚಿನ ಜಮೀನಿನ ಮೇಲೆ ವಕ್ಫ್ ಕಣ್ಣು ಹಾಕಿದೆ. ಇಷ್ಟೇ ಅಲ್ಲದೇ ಯಕ್ಸಂಬಾ ಪಟ್ಟಣದ ಜೊಲ್ಲೆ ಕುಟುಂಬದ ಹಲವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.
ಇದಕ್ಕೂ ಮೊದಲು ವಿಜಯಪುರದಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಕ್ಷೇತ್ರದ ಹೊನವಾಡ ಗ್ರಾಮದ 15 ರೈತರಿಗೆ ನೋಟಿಸ್ ಹೋಗಿತ್ತು. ನೋಟಿಸ್ನಲ್ಲಿ ನಿಮ್ಮ ಜಮೀನು ವಕ್ಫ್ ಆಸ್ತಿಯಾಗಿದ್ದು, ಪಹಣಿ ಪತ್ರದಲ್ಲಿ ಕಾಲಂ ನಂ 11 ಹಾಗೂ 9ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಸೂಚಿಸಲಾಗಿತ್ತು.
ವಕ್ಫ್ ವಿವಾದದ (Waqf Board) ವಿಚಾರವಾಗಿ ಕರಾಳ ದೀಪಾವಳಿ ಆಚರಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಬಳಿಕ ರೈತರಿಗೆ ನೀಡಿದ್ದ ನೋಟಿಸ್ನ್ನು (Notice) ಜಿಲ್ಲಾಡಳಿತ (District Administration) ಹಿಂಪಡೆದಿತ್ತು.