ಮಂಗಳೂರು: ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡ್ತಿದ್ದಾರೆ ಎಂದು ವಿರೋಧ ಪಕ್ಷದ ವಿರುದ್ಧ ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ (B K Hariprasad) ಕಿಡಿಕಾರಿದ್ದಾರೆ. ಇದನ್ನೂ ಓದಿ:ಲವ್ ಯೂ ಗೊಂಬೆ ಎಂದು ತಂಗಿಗೆ ಲವ್ಲಿ ನೋಟ್ ಬರೆದ ರಶ್ಮಿಕಾ ಮಂದಣ್ಣ
ಯಾವಾಗಲೂ ಬಿಜೆಪಿಯವರು (BJP) ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ. ರಾಜ್ಯಪಾಲರು ರಾಜ ಭವನ ದುರುಪಯೋಗ ಮಾಡ್ತಿದ್ದಾರೆ. ಸಂವಿಧಾನದ ಚೌಕಟ್ಟು ಬಿಟ್ಟು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಲು ಆಗಲ್ಲ. ರಾಜ್ಯಪಾಲರು ಬಿಜೆಪಿ ಪರ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಈ ವೇಳೆ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ಮೂಲಕ ಸರ್ಕಾರವನ್ನು ಕೆಡವುತ್ತಿತ್ತು. ಆದರೆ ಈಗ ಬೇರೆ ವಾಮಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನ ಮಾಡ್ತಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ನ್ಯಾಯಾಂಗ ಹೋರಾಟ ಆಗುತ್ತಿದೆ ಎಂದು ಸಿಎಂ ಪರ ಬ್ಯಾಟ್ ಬೀಸಿದರು.
ಯಡಿಯೂರಪ್ಪ ಪ್ರಕರಣ 20 ಕೋಟಿ ಚೆಕ್ ಮೂಲಕ ಲಂಚ ಪಡೆದಿದ್ದಾರೆ. ಗಡಿಪಾರಾಗಿದ್ದ ಅಮಿತ್ ಶಾ ಕೂಡ ಆ ನಂತರ ಮಂತ್ರಿಯಾಗಿಲ್ವಾ?. ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪಗಳಿತ್ತು. ಈ ಆರೋಪ ಕಪೋಲಕಲ್ಪಿತ ಆಗಿತ್ತು. ರಾಜ್ಯಪಾಲರು ಈ ಹಿಂದೆ ದಲಿತ ರಾಜಕಾರಣಿ ಆಗಿದ್ದವರು. ಗೆಹ್ಲೋಟ್ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದಿದ್ದಾರೆ.
ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ, ಸಂವಿಧಾನ ಬದಲಾವಣೆ ಅಂತ ಯಾಕೆ ಮಾತನಾಡ್ತಿದ್ದರು. ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ ಯಾವುದೇ ಗಲಾಟೆ ಮಾಡಿಲ್ಲ. ಐವನ್ ಡಿಸೋಜಾ ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಬಾಂಗ್ಲಾದೇಶ ಮತ್ತು ಭಾರತವನ್ನು ನಾವು ಒಂದು ಮಾಡೋದು ಬೇಡ. ಸಂವಿಧಾನಿಕ ಹುದ್ದೆಯಲ್ಲಿರೋ ವಿರುದ್ದ ನಾವು ಹೋರಾಟ ಮಾಡೋದು ಸರಿಯಲ್ಲ. ಆದರೆ ಅವರು ತೆಗೆದುಕೊಂಡ ನಿರ್ಧಾರದ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.