ಅಣ್ಣನ ಬೌಲಿಂಗ್‌ಗೆ ಸಿಕ್ಸರ್‌ ಸಿಡಿಸಿ ಗೆಲುವು ತಂದುಕೊಟ್ಟ ಪಠಾಣ್‌ – ಸಚಿನ್‌ ಬಳಗಕ್ಕೆ 4 ವಿಕೆಟ್‌ಗಳ ಜಯ

Public TV
3 Min Read
One World

– ಕೊನೇ ಓವರ್‌ನಲ್ಲಿ ಸಿಕ್ಸರ್‌ ಸಿಡಿಸಿದ ಇರ್ಫಾನ್‌ ಪಠಾಣ್‌
– ಯುವರಾಜ್‌ ಸಿಂಗ್‌ ಬಳಗಕ್ಕೆ ವಿರೋಚಿತ ಸೋಲು

ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆದ ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್ (One World- One Family Cup) ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿನ್‌ ತೆಂಡೂಲ್ಕರ್‌ (Sachin Tendulkar) ನೇತೃತ್ವದ ಒನ್‌ ವರ್ಲ್ಡ್ ತಂಡವು 4 ವಿಕೆಟ್‌ಗಳ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಅಣ್ಣ ಯುಸೂಫ್‌ ಪಠಾಣ್‌ (Yusuf Pathan) ಬೌಲಿಂಗ್‌ಗೆ ಭರ್ಜರಿ ಸಿಕ್ಸರ್‌ ಬಾರಿಸುವ ಮೂಲಕ ತಮ್ಮ ಇರ್ಫಾನ್‌ ಪಠಾಣ್‌ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

CKB Cricket

ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ (Sai Krishnan Cricket Stadium) ಲೋಕಾರ್ಪಣೆ ಅಂಗವಾಗಿ ನಡೆದ  ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಒನ್‌ ವರ್ಲ್ಡ್‌ ತಂಡವು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಒನ್‌ ಫ್ಯಾಮಿಲಿ ತಂಡಕ್ಕೆ ಬಿಟ್ಟುಕೊಟ್ಟಿತು. ಈ ಮೂಲಕ ಮೊದಲು ಬ್ಯಾಟಿಂಗ್‌ ಮಾಡಿದ ನಾಯಕ ಯುವರಾಜ್‌ ಸಿಂಗ್‌ (Yuvraj Singh) ನೇತೃತ್ವದ ಒನ್‌ ಫ್ಯಾಮಿಲಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತ್ತು. 181 ರನ್‌ಗಳ ಗುರಿ ಬೆನ್ನತ್ತಿದ್ದ ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಒನ್‌ ವರ್ಲ್ಡ್‌ ತಂಡ 19.5 ಓವರ್‌ಗಳಲ್ಲೇ 184 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್‌ ಆರಂಭಿಸಿದ ಒನ್‌ ವರ್ಲ್ಡ್‌ ತಂಡದ ಪರ ನಮನ್‌ ಓಜಾ ಹಾಗೂ ಸಚಿನ್‌ ತೆಂಡೂಲ್ಕರ್‌ ಜೋಡಿ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ನೀಡಿದ್ರೆ, 2ನೇ ವಿಕೆಟ್‌ಗೆ ಸಚಿನ್‌ ಹಾಗೂ ಅಲ್ವಿರೋ ಪೀಟರ್ಸನ್ ಜೋಡಿ 22 ಎಸೆತಗಳಲ್ಲಿ 41 ರನ್‌ ಕಲೆಹಾಕಿತು. ನಂತರ 3ನೇ ವಿಕೆಟ್‌ಗೆ ಪೀಟರ್ಸನ್‌ ಹಾಗೂ ಉಪುಲ್ ತರಂಗ ಜೋಡಿ 44 ಎಸೆತಗಳಲ್ಲಿ 59 ರನ್‌ ಪೇರಿಸಿತು. ಇದರಿಂದ ತಂಡದ ಗೆಲುವಿನ ಹಾದಿ ಸುಗಮವಾಯಿತು.

CKB Cricket 5

148 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಲ್ವಿರೋ ಪೀಟರ್ಸನ್ 50 ಎಸೆತಗಳಲ್ಲಿ 74 ರನ್‌ (5 ಬೌಂಡರಿ, 3 ಸಿಕ್ಸರ್‌) ಬಾರಿಸಿದರು. ಇನ್ನುಳಿದಂತೆ ನಮನ್ ಓಜಾ 25 ರನ್‌, ಸಚಿನ್‌ 27 ರನ್‌, ಉಪುಲ್ ತರಂಗ 29 ರನ್‌, ಸುಬ್ರಮಣ್ಯಂ ಬದರಿನಾಥ್ 4 ರನ್‌, ಹರ್ಭಜನ್ ಸಿಂಗ್ 4 ರನ್‌ ಗಳಿಸಿದ್ರೆ ಇರ್ಫಾನ್ ಪಠಾಣ್ (Irfan Pathan) 12 ರನ್‌ ಗಳಿಸಿ ಅಜೇಯರಾಗುಳಿದರು.

ಚಮಿಂದಾ ವಾಸ್ ಮಾರಕ ದಾಳಿ:
ಒನ್‌ ವರ್ಲ್ಡ್‌ ತಂಡದ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿದ ಶ್ರೀಲಂಕಾ ತಂಡದ ಮಾಜಿ ಎಡಗೈ ವೇಗಿ ಚಮಿಂದಾ ವಾಸ್ 3 ವಿಕೆಟ್‌ ಪಡೆದರು. 4 ಓವರ್‌ಗಳಲ್ಲಿ 44 ರನ್‌ ಚಚ್ಚಿಸಿಕೊಂಡ ಹೊರತಾಗಿಯೂ 3 ವಿಕೆಟ್‌ ಪಡೆದುಕೊಂಡರು. ವಿಶೇಷವೆಂದರೆ ದಶಕಗಳ ಬಳಿಕ ಬೌಲಿಂಗ್‌ನಲ್ಲಿ ಎದುರಾದ ಮಿಂದಾ ವಾಸ್ದು ಬೌಲಿಂಗ್‌ಗೆ ಸಚಿನ್‌ ತೆಂಡೂಲ್ಕರ್‌ ಸತತ ಎರಡು ಮನಮೋಹಕ ಬೌಂಡರಿ ಸಿಡಿಸಿದರು. ಇನ್ನುಳಿದಂತೆ ಮುತ್ತಯ್ಯ ಮುರಳೀಧರನ್‌, ಯುವರಾಜ್‌ ಸಿಂಗ್‌, ಜೇಸನ್ ಕ್ರೆಜ್ಜಾ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

CKB Cricket 2

181 ಟಾರ್ಗೆಟ್‌ ನೀಡಿದ್ದ ಒನ್‌ ಫ್ಯಾಮಿಲಿ:
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಯುವರಾಜ್‌ ಸಿಂಗ್‌ ನೇತೃತ್ವದ ಒನ್‌ ಫ್ಯಾಮಿಲಿ ತಂಡ ಎದುರಾಳಿ ತಂಡಕ್ಕೆ 181 ರನ್‌ಗಳ ಗುರಿ ನೀಡಿತ್ತು. ಡ್ಯಾರೆನ್ ಮ್ಯಾಡಿ 51 ರನ್‌ (41 ಎಸೆತ, 8 ಬೌಂಡರಿ), ರೋಮೇಶ್ ಕಲುವಿತಾರಣ 22 ರನ್‌ (15 ಎಸೆತ, 4 ಬೌಂಡರಿ), ಮೊಹಮ್ಮದ್ ಕೈಫ್ 9 ರನ್‌, ಪಾರ್ಥಿವ್ ಪಟೇಲ್ 19 ರನ್‌ (13 ಎಸೆತ, 3 ಬೌಂಡರಿ), ಯೂಸುಫ್ ಪಠಾಣ್ 38 ರನ್‌ (23, 4 ಸಿಕ್ಸರ್‌, 1 ಬೌಂಡರಿ), ಯುವರಾಜ್ ಸಿಂಗ್ 23 ರನ್‌ (10 ಎಸೆತ, 2 ಸಿಕ್ಸರ್‌, 2 ಬೌಂಡರಿ), ಜೇಸನ್ ಕ್ರೆಜ್ಜಾ 2 ರನ್‌ ಹಾಗೂ ಅಲೋಕ್ ಕಪಾಲಿ 1 ರನ್‌ ಗಳಿಸಿದ್ರೆ, ಹೆಚ್ಚುವರಿ 15 ರನ್‌ ತಂಡಕ್ಕೆ ಸೇರ್ಪಡೆಯಾಗಿತ್ತು.

Share This Article