ಕೇಂದ್ರದಿಂದ ಬಂದ ಹಣ ನಿದ್ರೆಯಲ್ಲಿರುವ ಸಿದ್ದರಾಮಯ್ಯಗೆ ಕಾಣಿಸುತ್ತಿಲ್ಲ: ಬೊಮ್ಮಾಯಿ

Public TV
2 Min Read
Basavaraj Bommai 1

ಬೆಂಗಳೂರು: ದಿವಸಕ್ಕೆ ಹದಿನೆಂಟು ತಾಸು ದೇಶಕ್ಕಾಗಿ ಕೆಲಸ ಮಾಡುವ ಒಂಭತ್ತುವರೆ ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಠಿಣ ಪರಿಶ್ರಮಿ, ಅಪ್ಪಟ ದೇಶಭಕ್ತ ನಮ್ಮ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿಯನ್ನು ಮಾಡಿದ್ದಾರೆ. ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ ಸಿದ್ದರಾಮಯ್ಯ ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಂತೆ ಕಾಣಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾಡಿರುವ ಟ್ವೀಟ್‌ಗೆ ತಿರುಗೇಟು ನೀಡಿರುವ ಅವರು, ಯುಪಿಎ 2004-2014ರ ಹತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ 81,795.19 ಕೋಟಿ ರೂ. ಹಾಗೂ ಅನುದಾನ ಹಂಚಿಕೆ ರೂಪದಲ್ಲಿ 60779.84 ಕೋಟಿ ರೂ. ಹಣ ಬಂದರೆ ಮೋದಿ ಅವಧಿಯಲ್ಲಿ 2014-2023 ಡಿಸೆಂಬರ್‌ವರೆಗೆ ತೆರಿಗೆ ಹಂಚಿಕೆಯಲ್ಲಿ 2,82,791 ಕೋಟಿ ರೂ. ಬಂದರೆ, ಅನುದಾನ ಹಂಚಿಕೆಯಲ್ಲಿ 2,08,882.02 ಕೋಟಿ ರೂ. ಬಂದಂತಹ ಹಣ ಇವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಯತೀಂದ್ರ ಜವಾಬ್ದಾರಿಯುತ ನಾಯಕ, ಅವರ ಮಾತನ್ನು ತಿರುಚುವ ಅಗತ್ಯವಿಲ್ಲ: ಡಿ.ಕೆ.ಶಿವಕುಮಾರ್

ಮೇ ತಿಂಗಳಲ್ಲಿ 360 ಕೋಟಿ ರೂ. ಬಿಡುಗಡೆಯಾಗಿದ್ದು, ಈಗ ಮತ್ತೆ 348 ಕೋಟಿ ರೂ. ಬಿಡುಗಡೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇಷ್ಟಾದರೂ ಕೂಡ ರೈತರಿಗೆ ಬಿಡಿಗಾಸು ಕೊಡಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಡಲು ನಿಮ್ಮ ಬೊಕ್ಕಸ ಖಾಲಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಕೃಷ್ಣಾ ಮೆಲ್ದಂಡೆ ಹಾಗೂ ಮಹದಾಯಿ ಎರಡೂ ಯೋಜನೆಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದು ಗೊತ್ತಿದ್ದರೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಏಕೆ? ಈ ವರ್ಷ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೊಟಿ ರೂ. ಕೇಂದ್ರದ ಬಜೆಟ್‌ನಲ್ಲಿದ್ದು ಅದನ್ನು ಪಡೆದುಕೊಳ್ಳಲಾಗದೇ ಗಾಢ ನಿದ್ರೆಯಲ್ಲಿದ್ದವರಾರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇವರನ್ನು ಗೊಂಬೆ ಎನ್ನುವ ಕಾಂಗ್ರೆಸ್ ಪಕ್ಷದ ಅವನತಿಗೆ ಈ ಹೇಳಿಕೆಯೇ ಅಡಿಗಲ್ಲು: ಆರ್.ಅಶೋಕ್

ಕಳೆದ ಐದು ವರ್ಷದಲ್ಲಿ 30 ಸಾವಿರ ಕೋಟಿ ರಾಷ್ಟ್ರೀಯ ಹೆದ್ದಾರಿಗೆ ಮೋದಿ ಸರ್ಕಾರ ಹಣ ಒದಗಿಸಿದೆ. ನೀವು ಓಡಾಡುವ ಬೆಂಗಳೂರು-ಮೈಸೂರು ಹೈವೇ ನಿರ್ಮಾಣದ ಸಂಪೂರ್ಣ ವೆಚ್ಚ ಮೋದಿ ಸರ್ಕಾರ ಒದಗಿಸಿರುವುದು ನಿಮ್ಮ ಅನುಭವಕ್ಕೆ ಬಂದಿಲ್ಲವೇ? ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 1327.43 ಕೋಟಿ ರೂ. ಬಿಡುಗಡೆಯಾಗಿದೆ. ಇದೇ ರೀತಿ ರೈಲ್ವೆ, ಬಂದರು, ಅಭಿವೃದ್ಧಿಗೆ ಮೋದಿಯ ಪಾಲು ನಿಮಗೆ ಕಾಣುತ್ತಿಲ್ಲವೇ? ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10,990 ಕೋಟಿ ರೂ., ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 62 ಲಕ್ಷ ಜನರಿಗೆ ಆರೋಗ್ಯದ ಚಿಕಿತ್ಸೆ ಕೊಟ್ಟಿರುವ ಮೋದಿಯವರ ನಿರಂತರ ಪರಿಶ್ರಮ ಹಾಗೂ ಕ್ರಿಯಾಶೀಲತೆಗೆ ಸಾಕ್ಷಿ ಎಂದರು. ಇದನ್ನೂ ಓದಿ: ಮೂರ್ಖರಿಗೆ ಜನರು ಚಪ್ಪಾಳೆ ತಟ್ಟಬಾರದು- ಅನಂತ್ ಕುಮಾರ್ ವಿರುದ್ಧ ಸಿಎಂ ಕಿಡಿ

ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ 10 ಕೋಟಿ ಡೋಸ್ ಲಸಿಕೆ ಹಾಕಿಸಿದ್ದು, ನಿದ್ರೆಯಲ್ಲಿರುವ ನಿಮಗೆಲ್ಲಿ ಕಾಣಿಸುತ್ತದೆ. ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿ ಅಧೋಗತಿಗೆ ತೆಗೆದುಕೊಂಡು ಹೋಗಿರುವ ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ಕರ್ನಾಟಕ ಜನರ ದೌರ್ಭಾಗ್ಯ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಬದಲಾವಣೆ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ: ‌ಜಿ. ಪರಮೇಶ್ವರ್

Share This Article