ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನರಾಗಿ ಎರಡು ವರ್ಷಗಳು ಕಳೆದಿದೆ. ಈ ನೋವಿನಿಂದ ಹೊರಬರುವ ಮುನ್ನವೇ ಸ್ಪಂದನಾ ಸಾವು ಕುಟುಂಬಕ್ಕೆ ಆಘಾತವುಂಟು ಮಾಡಿದೆ. ಸಂಬಂಧಿ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ(Spandana) ಹಠಾತ್ ನಿಧನದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shiva Rajkumar) ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಸ್ಪಂದನಾ ಇಲ್ಲ ಅನ್ನೋ ಆ ನೋವಿನ ಭಾರ ಯಾವತ್ತೂ ಕಮ್ಮಿ ಆಗಲ್ಲ ಅಂತಾ ಶಿವಣ್ಣ ಭಾವುಕರಾಗಿದ್ದಾರೆ.
ಕೆಲದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿರುವ ಸ್ಪಂದನಾ (Spandana) ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿ, ರಾಘು ಅವರನ್ನ ಚಿಕ್ಕ ಮಗುವಿನಿಂದ ನಾವು ನೋಡಿಕೊಂಡು ಬಂದಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಸ್ಪಂದನಾ ಹೋದರು. ನನ್ನ ಮಾವನ ಮಗ ರಾಘು, ಹಾರ್ಟಲಿ ತುಂಬಾ ಒಳ್ಳೆಯ ವ್ಯಕ್ತಿ. ಅವನು ಜೋರಾಗಿ ಮಾತನಾಡಿದ್ದು, ನನ್ನ ಲೈಫ್ನಲ್ಲಿ ನಾನು ನೋಡೇ ಇಲ್ಲ. ಸ್ಪಂದನಾ ಸಾವಿನ ವಿಚಾರ ಕೇಳಿದಾಗಿನಿಂದ ನಾವೆಲ್ಲರೂ ನೋವಿನಲ್ಲೇ ಇದ್ದೀವಿ.
ಸ್ಪಂದನಾ ಇಲ್ಲ ಅನ್ನೋ ಆ ನೋವಿನ ಭಾರ ಯಾವತ್ತು ಹೋಗಲ್ಲ. ಅವರು ಯಾವಾಗಲೂ ನಮ್ಮ ಜೊತೆಯಲ್ಲೇ ಇದ್ದಾರೆ ಅಂದುಕೋ ಎಂದು ನಾವು ರಾಘುಗೆ ಹೇಳ್ತಾ ಇದ್ದೀವಿ. ಒಬ್ಬ ಮನುಷ್ಯನ ಅಷ್ಟು ಈಸಿಯಾಗಿ ಕಳುಹಿಸಬಾರದು. ಅವರ ನೆನಪು ಜೊತೆಯಲ್ಲೇ ತೆಗೆದುಕೊಂಡು ಹೋಗಬೇಕು. ಮಗ ಶೌರ್ಯನಿಗೂ ಒಳ್ಳೆಯದಾಗುತ್ತೆ. ವಿಜಯ ಕುಟುಂಬಕ್ಕೆ ದೇವರು ಶಕ್ತಿ ಕೊಡಬೇಕು ಎಂದು ಶಿವಣ್ಣ ಮಾತನಾಡಿದ್ದಾರೆ. ಇದನ್ನೂ ಓದಿ:ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ- ಡಿಸೆಂಬರ್ ನನ್ನ ಲಕ್ಕಿ ತಿಂಗಳು ಎಂದ ರಶ್ಮಿಕಾ ಮಂದಣ್ಣ
ಸ್ಪಂದನಾ ಅವರನ್ನ ಸಾಕಷ್ಟು ವರ್ಷಗಳಿಂದ ನೋಡಿದ್ದೇನೆ. ಒಮ್ಮೆ ನಮ್ಮ ಲೀಡರ್ (Leader Film) ಸಿನಿಮಾ ಸೆಟ್ಗೆ ಅವರು ಬಂದಿದ್ದರು. ನಾವು ಒಳ್ಳೆಯ ಸಮಯ ಕಳೆದಿದ್ವಿ. ಒಳ್ಳೆಯ ವ್ಯಕ್ತಿ ಅವರು. ಯಾವಾಗಲೂ ನಗು ನಗುತ್ತಲೇ ಮಾತನಾಡುತ್ತಿದ್ದರು. ಸಿಟ್ಟು ಮಾಡಿಕೊಂಡಿದ್ದು ನಾವು ನೋಡಿಲ್ಲ. ಆಕೆಯ ಮುಖ ನಾವು ಮರಿಯೋಕೆ ಆಗಲ್ಲ. ಆಕೆ ಇಲ್ಲಾ ಅಂತಾ ಅಂದುಕೊಳ್ಳೋಕೆ ಆಗಲ್ಲ. ಸ್ಪಂದನಾ ನಮ್ಮ ಜೊತೆಯಾಗಿಯೇ ಇದ್ದಾರೆ ಎಂದು ಶಿವಣ್ಣ ಭಾವುಕರಾಗಿದ್ದಾರೆ.
ವಿಜಯ ರಾಘವೇಂದ್ರಗೆ ಬೆಂಬಲವಾಗಿ ನಾವು ಇದ್ದೀವಿ. ಎಲ್ಲರೂ ಅವರ ಜೊತೆ ಇರುತ್ತೀವಿ. ಅಂತ್ಯಕ್ರಿಯೆ ದಿನ ಎಷ್ಟು ಜನ ನೋಡೋಕೆ ಬಂದಿದ್ರು. ಅಷ್ಟು ಪ್ರೀತಿ ಅವರು ಗಳಿಸಿದ್ದಾರೆ ಎಂದು ಗೊತ್ತಾಗುತ್ತದೆ. ನಮ್ಮ ಅಳು ಶೌರ್ಯಗೆ ಪರಿಣಾಮ ಬೀರಬಾರದು. ಆ ಮಗು ಮುಂದೆ ನಡೆಯಬೇಕು. ಅವನ ಜೀವನಕ್ಕೆ ಆಧಾರವಾಗಿ ನಿಲ್ಲಬೇಕು. ಅದಕ್ಕೆ ನಾವು ಸ್ಟ್ರಾಂಗ್ ಆಗಿ ನಿಲ್ಲಬೇಕು ಎಂದು ಶಿವಣ್ಣ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್ಗೆ ತೆರಳಿದ್ದರು. ಹೃದಯಾಘಾತದಿಂದ ಸ್ಪಂದನಾ ವಿಧಿವಶರಾಗಿದ್ದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್ ನೀಡಿದೆ.