– 10 ದಿನಗಳ ಬಳಿಕ ಭೂಮಿಗೆ ಅಪ್ಪಳಿಸಿದ ಸೈಕ್ಲೋನ್
– 90 ಸಾವಿರ ಮಂದಿ ಸ್ಥಳಾಂತರ
ಗಾಂಧಿನಗರ: ಬಿಪರ್ಜಾಯ್ ಚಂಡಮಾರುತ (Cyclone Biparjoy) ಗುರುವಾರ ಸಂಜೆ 6:40ರ ವೇಳೆ ಗುಜರಾತಿನ (Gujarat) ಕಛ್ ತೀರದ ಲಖಪತ್ ಬಳಿ ಅಪ್ಪಳಿಸಿದ್ದು, ಅರಬ್ಬಿ ಸಮುದ್ರ (Arabian Sea) ತೀರ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಸುಮಾರು 10 ದಿನಗಳ ಕಾಲ ಸಮುದ್ರದಲ್ಲಿ ಸಂಚರಿಸಿದ್ದ ಚಂಡಮಾರುತ ಇದೇ ಮೊದಲ ದಾರಿಗೆ ಭೂಭಾಗಕ್ಕೆ ಅಪ್ಪಳಿಸಿದೆ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿಗಳು, ಕಂಬಗಳು ಮುರಿದುಬಿದ್ದಿದೆ. 45ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಮಸ್ಯೆಯಾಗಿದೆ. ವಿವಿಧ ಸ್ಥಳಗಳಲ್ಲಿ 524 ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಸುಮಾರು 940 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಈಗಾಗಲೇ ದ್ವಾರಕ, ಪೋರಬಂದರ್, ಜಾಮ್ನಗರ, ಮೋರ್ಬಿ ಸೇರಿ ಹಲವೆಡೆ ಮೂರರಿಂದ ಆರು ಮೀಟರ್ ಎತ್ತರದವರೆಗೂ ರಕ್ಕಸಗಾತ್ರದ ಅಲೆಗಳು ಏಳುತ್ತಿವೆ. ತೂಫಾನ್ ತೀವ್ರತೆಯನ್ನು ಗಮನದಲ್ಲಿರಿಸಿಕೊಂಡು ಸಮೀಪ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದೇಗುಲಗಳು, ಕಚೇರಿಗಳು, ಶಾಲೆಗಳು ಬಂದ್ ಆಗಿವೆ.ಇದನ್ನೂ ಓದಿ: ದೇಶಕ್ಕೆ ಹೊಸದಾಗಿ ಸಮರ್ಪಣೆಗೊಂಡ ಜಲಾಂತರ್ಗಾಮಿ ಹಡಗಿಗೆ ಕಾರವಾರದ ದ್ವೀಪದ ಹೆಸರಿಟ್ಟ ಭಾರತೀಯ ನೌಕಾಪಡೆ – ಏನಿದರ ವಿಶೇಷತೆ?
ಕರಾವಳಿ ಮತ್ತು ತಗ್ಗು ಪ್ರದೇಶಗಳಿಂದ ಸುಮಾರು 94 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ತಾತ್ಕಾಲಿಕವಾಗಿ 99 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ನಿಧನವಾಗಿ ಚಂಡಮಾರುತದ ಅಬ್ಬರ ಕಡಿಮೆಯಾಗುತ್ತಿದ್ದು ಈಗ ಗಂಟೆಗೆ 105-115 ಕಿಲೋಮೀಟರ್ ವೇಗದ ಗಾಳಿ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಚಂಡಮಾರುತ ಇಂದು ಮತ್ತಷ್ಟು ದುರ್ಬಲವಾಗಲಿದೆ. ಚಂಡ ಮಾರುತ ರಾಜಸ್ಥಾನ ಕಡೆ ಚಲಿಸುತ್ತಿರುವುದರಿಂದ ಇಂದು ಮತ್ತು ನಾಳೆ ರಾಜಸ್ಥಾನದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.