ರಾಜ್ಯದಲ್ಲಿ ಬಿಜೆಪಿ ನೆಲ ಕಚ್ಚಲು ನಮ್ಮ ಪಕ್ಷ ಕಾರಣ – ಜನಾರ್ದನ ರೆಡ್ಡಿ

Public TV
2 Min Read
janardhan reddy

ಕೊಪ್ಪಳ: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾರಣ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಹೇಳಿದರು.

ಕೊಪ್ಪಳದ‌ (Koppala) ಗಂಗಾವತಿ ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಇಂದು‌ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬೂತ್‌ ಮಟ್ಟದ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರ ಆತ್ಮಾವಲೋಕನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷ ಸ್ಥಾಪನೆಗೂ ಮುಂಚೆ ನನ್ನನ್ನು ಪಕ್ಷಕ್ಕೆ ಬರಮಾಡಿಕೊಳ್ಳಿ ಎಂದು ಬಿಜೆಪಿ ಪಕ್ಷದ ಮುಖಂಡರ ಮನೆ ಬಾಗಿಲಿಗೆ ಹೋಗಿಲ್ಲ. ಅಮಿತ್ ಶಾ, ನರೇಂದ್ರ ಮೋದಿಯವರ ಬಳಿಯೂ ಹೋಗಿಲ್ಲ. ಎಷ್ಟೋ ಬಾರಿ ಅಮಿತ್ ಶಾ ಅವರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ನಾನು ಅವರಿಗೆ ಸಿಕ್ಕಿಲ್ಲ. ಬಿಜೆಪಿ ಪಕ್ಷವನ್ನು ನಾನೇ ದೂರ ಇಟ್ಟೆ ಎಂದು ಮಾರ್ಮಿಕವಾಗಿ ನುಡಿದರು. ಇದನ್ನೂ ಓದಿ: ಯಾರೂ ವಿದ್ಯುತ್ ಬಿಲ್ ಕಟ್ಬೇಡಿ, ಬಿಲ್ ಬಂದ್ರೆ ಸಿಎಂಗೆ ಕಳ್ಸಿ – ಸಿ.ಟಿ ರವಿ

bjp flag 3

ಬಳ್ಳಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಎರಡನೇ ಸ್ಥಾನದಲ್ಲಿ ಬಂದಿದ್ದಾರೆ. ಕೇವಲ ನೂರು ದಿನಗಳಲ್ಲಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಕ್ಷೇತ್ರದ ಹೆಚ್ಚಿನ ಜನರ ಮನಸ್ಸು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಾನು ಬೆಳೆಸಿದ ಹೇಡಿಗಳು, ನನ್ನ ಅಣ್ಣ-ತಮ್ಮಂದಿರು ಸೇರಿದಂತೆ ಎಲ್ಲರೂ ಇಂದು ಮನೆಯಲ್ಲಿ ಕೂಡುವ ಪರಿಸ್ಥಿತಿ ಬಂದಿದೆ. ನಾನೊಬ್ಬನೆ ಇಂದು ವಿಧಾನಸೌಧಕ್ಕೆ ಹೋಗುತ್ತಿದ್ದೇನೆ ಎಂದು ಸೋತಿರುವ ಪ್ರಮುಖ ನಾಯಕರಿಗೆ ಕುಟುಕಿದರು. ಇದನ್ನೂ ಓದಿ: 12ನೇ ತರಗತಿ ಪಾಸ್‌ ಮಾಡಿದ ಸಿಎಂ ಸಿದ್ದರಾಮಯ್ಯ ಮೊಮ್ಮಗ

ಮುಂದಿನ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆ ಸೇರಿದಂತೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಆರ್‌ಪಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕು. ಬಳ್ಳಾರಿಯಲ್ಲಿ ಆದ ಸೋಲಿನಿಂದ ಕಾರ್ಯಕರ್ತರು ಎದೆಗುಂದದೆ ಸಂಘಟನೆಗೆ ಮುನ್ನುಗ್ಗಿ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಎಲ್ಲಾ ವಾರ್ಡ್‌ಗಳಲ್ಲಿ ಕೆಆರ್‌ಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ಬಳ್ಳಾರಿ ಹಾಗೂ ಗಂಗಾವತಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿ ನಾನು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ. ಬಿಜೆಪಿ ಪಕ್ಷದ ಅಷ್ಟೂ ಶಾಸಕರಿಗೆ ನಾನೊಬ್ಬನೇ ಸಮ. ವಿಧಾನಸೌಧದಲ್ಲಿ ನೂರು ಜನ ಶಾಸಕರು ಮಾಡುವ ಕೆಲಸವನ್ನು ನಾನೊಬ್ಬನೆ ಮಾಡಿ ತೋರಿಸುತ್ತೇನೆ. ನೂರು ಜನ ಶಾಸಕರಿಗೆ ಈ ಒಬ್ಬ ಗಾಲಿ ಜನಾರ್ದನ ರೆಡ್ಡಿ ಸಮ ಎಂದು ಹೇಳಿದರು.

Share This Article