‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

Public TV
3 Min Read
Dheera Samrat 2

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರ ಸಾಮ್ರಾಟ್’ (Dheera Samrat) ಚಿತ್ರವು ತೆರೆಗೆ ಬರುವ ಹಂತ ತಲುಪಿದೆ. ಪ್ರಚಾರದ ಸಲುವಾಗಿ ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಸಾಂಗ್ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸರಿಯಾದ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‌ ಕುಮಾರ್(ಪಚ್ಚಿ) (Pawan Kumar) ಸಿನಿಮಾಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

Dheera Samrat 3

ಸರದಿಯಂತೆ ಮೊದಲು ಮೈಕ್ ತೆಗೆದುಕೊಂಡ ನಿರ್ದೇಶಕರು “ನಮ್ಮ ಸಿನಿಮಾ ಮಹೂರ್ತಕ್ಕೆ ಬಂದು, ಈಗ ಎಷ್ಟೇ ಬ್ಯುಸಿ ಇದ್ದರೂ, ಶೂಟಿಂಗ್‌ಗೆ ಬ್ರೇಕ್ ಮಾಡಿ ಹಾಡನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚುಮೆಚ್ಚಿನ ಧ್ರುವ ಸರ್ಜಾ, ಸ್ನೇಹಕ್ಕೆ ಸಾಹುಕಾರ ಎಂದೇ ಹೇಳಬಹುದು. ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದಿರಿಸಿದ್ದು, ಕ್ಲೈಮಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಎಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ. ಪ್ರಶ್ನೆ ಎನ್ನುವಂತೆ ಸಾವಿಗೆ ಸಾವಿಲ್ಲ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸದೆ ಸಮಾಜದಲ್ಲಿ ಯಾವುದೋ ಒಂದು  ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ” ಎಂದರು.

Dheera Samrat 4

ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ನಿರ್ಮಾಣ ಮಾಡಲಾಗಿದೆ. ಧೀರ ಸಾಮ್ರಾಟ್ ಅಂದರೆ ಏನು, ಯಾತಕ್ಕೆ ಈ ಟೈಟಲ್ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ತಿಳಿಯಲಿದೆ ಎಂದು ಗುಲ್ಬರ್ಗಾದ ಗುರುಬಂಡಿ ಹೇಳಿದರು. ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿ ಶೆಟ್ಟಿ ಪಾತ್ರದ ವಿವರವನ್ನು ಗೌಪ್ಯವಾಗಿಟ್ಟರು. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

Dheera Samrat 5

ಕೊನೆಯಲ್ಲಿ ಮಾತನಾಡಿದ ಧ್ರುವ ಸರ್ಜಾ, “ಸಿನಿಮಾ ಅಣ್ಣ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು. ಕಾರಣಾಂತರದಿಂದ 2020ಕ್ಕೆ ಮುಂದೂಡಲಾಯಿತು. ನಿರ್ದೇಶಕರು ಹೇಳಿದರು. ನಾವೆಲ್ಲರು ಹೊಸಬರು ಅಂತ. ನಾನು ಅದ್ದೂರಿ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‌ಗೆ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ. ನಮ್ಮದು ಹೋಗೋ ಬಾರೋ ಗೆಳತನ. ಆ ಸಮಯದಲ್ಲಿ ಸಾಕಷ್ಟು ಜನರು ಪ್ರೋತ್ಸಾಹ ಕೊಟ್ಟಿದ್ದರು. ಅದರಲ್ಲಿ ಪವನ್ ಕೂಡ ಒಬ್ಬರು. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಗೆಳೆಯ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂಥವರನ್ನು ಬೆಳೆಸಿದರೆ ಪ್ರೇರೆಪಿಸಿದಂತೆ ಮತ್ತು ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ನಾಯಕ ಚೆನ್ನಾಗಿ ಕುಣಿದಿದ್ದಾರೆ.  ಅದಕ್ಕೆ ಕಾರಣ ನನ್ನ ಫೇವರೇಟ್ ಡ್ಯಾನ್ಸ್ ಮಾಸ್ಟರ್ ಮುರಳಿ. ಪವನ್ ತಾಯಿ ವರ್ಷಕ್ಕೆ ಆಗುವಷ್ಟು ಬಿರಿಯಾನಿ ತಿನ್ನಿಸುತ್ತಾರೆ. ಎಲ್ಲರೂ ಸಾಂಗ್ ನೋಡಿ ಹೊಸಬರನ್ನು ಬೆಳಸಿರಿ” ಎಂದು ಮಾತಿಗೆ ವಿರಾಮ ಹಾಕಿದರು.

Dheera Samrat 1

ತಾರಾಗಣದಲ್ಲಿ ಶಂಕರ ಭಟ್, ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್‌ ಭಟ್, ಯತಿರಾಜ್, ಮನಮೋಹನ್‌ ರೈ, ಇಂಚರ, ಸಂಕಲ್ಪ್‌ ಪಾಟೀಲ್ ರವಿರಾಜ್, ಜ್ಯೋತಿ ಮರೂರು, ಮಂಡ್ಯಾ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್‌ ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ಭರ್ಜರಿ ಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ ಹಾಗೂ ಅರುಣ್‌ಸುರೇಶ್, ಸಂಕಲನ ಸತೀಶ್‌ ಚಂದ್ರಯ್ಯ, ಹಿನ್ನಲೆ ಶಬ್ದ ವಿನು ಮನಸು, ಸಂಭಾಷಣೆ ಎ.ಆರ್.ಸಾಯಿರಾಮ್, ಸಾಹಸ ಕೌರವ ವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Share This Article