ಧಾರವಾಡ: ಮಲ್ಲಿಕಾರ್ಜುನ್ ಖರ್ಗೆ ಅವರು ತಮ್ಮ ಮನಸ್ಸೊಳಗಿನ ವಿಷ ಉಗುಳಿದ್ದಾರೆ. ಅವರು ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೂಚನೆ ಮೇರೆಗೆ ಹೀಗೆ ಮಾತಾಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಕಿಡಿಕಾರಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಖರ್ಗೆಯವರು ತಮ್ಮ ಮನಸ್ಸಿನ ವಿಷ ಹೊರಹಾಕಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೂಚನೆ ಮೇರೆಗೆ ಹೀಗೆ ಮಾತಾಡಿದ್ದಾರೆ. ಖರ್ಗೆ ಅಂತಹ ರಾಷ್ಟ್ರೀಯ ನಾಯಕರು ಈ ರೀತಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಖರ್ಗೆ ಹೇಳಿಕೆಗೆ ವಾಗ್ದಾಳಿ ನಡೆಸಿದರು.
ಈ ಚುನಾವಣೆಯಲ್ಲಿ ನಮಗೆ ಬಹಳ ಜೋಷ್ ಇದೆ. ನಾಯಕರು, ಕಾರ್ಯಕರ್ತರು ಬಹಳ ಉತ್ಸಾಹದಿಂದ ಪ್ರಚಾರ ಮಾಡುತ್ತಿದ್ದಾರೆ. ಜನ ನಮ್ಮ ಪ್ರಚಾರದ ವೇಳೆ ದೊಡ್ಡ ಮಟ್ಟದಲ್ಲಿ ಸೇರುವ ಮೂಲಕ ಆಶೀರ್ವಾದ ಮಾಡುತ್ತಿದ್ದಾರೆ. ಈ ಬಾರಿ ಜನರ ನಿರ್ಣಯ ನಮ್ಮ ಪರವೇ ಆಗಲಿದೆ. ಬಹುಮತ ಸಿಗಲ್ಲ ಎನ್ನುವ ಪ್ರಶ್ನೆಯೇ ಬರಲ್ಲ. ಬಹುಮತದ ಬಗ್ಗೆ ಮಾತೇಕೆ? ನಮಗೆ ಪೂರ್ಣ ಬಹುಮತ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
ಕಾಂಗ್ರೆಸ್ನವರ (Congress) 40% ಆರೋಪಕ್ಕೆ ಟಕ್ಕರ್ ನೀಡಿದ ಅವರು, ಕಾಂಗ್ರೆಸ್ ಕಾಲದಲ್ಲಿ ಹಲವು ಅಕ್ರಮಗಳಾಗಿವೆ. ಮಲಪ್ರಭ ಅಕ್ರಮ, ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿ ಅಕ್ರಮಗಳು, ಅರ್ಕಾವತಿ ಅಕ್ರಮ ಮಾಡಿದವರು ಕಾಂಗ್ರೆಸ್ನವರಾಗಿದ್ದಾರೆ. ಅವರ ಕಾಲದಲ್ಲಿ ಸಾಕಷ್ಟು ಅಕ್ರಮ ಮಾಡಿ ಈಗ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ನಮಗೆ ಕರ್ನಾಟದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಬದಲಾಗಿ ನಮ್ಮ ಪರವಾದ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಹೆಚ್.ವಿಶ್ವನಾಥ್
ಮುಂದಿನ ಸಿಎಂ ಬಗ್ಗೆ ಮಾತನಾಡಿದ ಅವರು, ಬೊಮ್ಮಾಯಿಯವರ ನೇತೃತ್ವದಲ್ಲಿ ಈ ಚುನಾವಣೆ ಎದುರಿಸುತ್ತೇವೆ. ಇದು ಎಲ್ಲರಿಗೂ ಸ್ಪಷ್ಟವಾಗಲಿ. ಸರ್ವೆಗಳಲ್ಲಿ ಏನೇ ಬರಲಿ ನಾವೇ ಗೆಲ್ಲೋದು. ಮೇ 13 ರಂದು ಫಲಿತಾಂಶ ನೋಡಿ, ನಿಮಗೇ ಗೊತ್ತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ- ಸಿದ್ದರಾಮಯ್ಯ