ಲಕ್ನೋ: ಮೊಘಲ್ ಸಾಮ್ರಾಜ್ಯದ (Mughal empire) ಕುರಿತಾದ ಅಧ್ಯಾಯಗಳನ್ನು ಸಿಬಿಎಸ್ಸಿ (CBSE) ಹಾಗೂ 12ನೇ ತರಗತಿಯ ಬೋರ್ಡ್ ಪಠ್ಯದಿಂದ ಉತ್ತರ ಪ್ರದೇಶ ಸರ್ಕಾರ ತೆಗೆದುಹಾಕಿದೆ.
ಶಾಲಾ ಶಿಕ್ಷಣದ ಕೇಂದ್ರ ಮತ್ತು ರಾಜ್ಯದ ಉನ್ನತ ಸಲಹಾ ಸಂಸ್ಥೆಯಾದ ಎನ್ಸಿಇಆರ್ಟಿ (NCERT) ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ನೂತನ ಪಠ್ಯ ಪುಸ್ತಕದಲ್ಲಿ 12ನೇ ತರಗತಿಯ ಮಧ್ಯಕಾಲೀನ ಇತಿಹಾಸ ಪಠ್ಯಪುಸ್ತಕಗಳಿಂದ (Textbooks) ಕಿಂಗ್ಸ್ ಮತ್ತು ಕ್ರಾನಿಕಲ್ಸ್ ಹಾಗೂ ದಿ ಮೊಘಲ್ ಕೋರ್ಟ್ಸ್ (Mughal Courts) ಅಧ್ಯಾಯಗಳನ್ನು ಕೈಬಿಟ್ಟಿದೆ. ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಹೊಸ 12ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಲಿವೆ. ಅದರಲ್ಲಿ ಮೊಘಲ್ ಇತಿಹಾಸದ ಪಠ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಿಸಿಲು
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ನಾವು ನಮ್ಮ ವಿದ್ಯಾರ್ಥಿಗಳಿಗೆ ಎನ್ಸಿಇಆರ್ಟಿ ಪುಸ್ತಕಗಳನ್ನು ಬಳಸಿ ಕಲಿಸುತ್ತೇವೆ. ಪರಿಷ್ಕೃತ ಆವೃತ್ತಿಯಲ್ಲಿ ಏನಿದೆಯೋ ಅದನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಪಠ್ಯ ಪರಿಷ್ಕರಣೆ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. 12ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಗಳನ್ನೂ ಪರಿಷ್ಕರಿಸಲಾಗಿದೆ. ಪ್ರಮುಖ ಚಳುವಳಿಗಳ ಉದಯ, ಭಾರತದಲ್ಲಿ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಉದಯ, ಏಕಪಕ್ಷದ ಪ್ರಾಬಲ್ಯದ ಯುಗ, ಸ್ವಾತಂತ್ರ್ಯ ನಂತರದ ಯುಗದಲ್ಲಿ ಕಾಂಗ್ರೆಸ್ ಆಡಳಿತದ ಪಠ್ಯಗಳಿನ್ನು ತೆಗೆಯಲಾಗಿದೆ. ಪರಿಷ್ಕೃತ ಆವೃತ್ತಿಯಲ್ಲಿ ಲಭ್ಯವಿರುವ ಪಠ್ಯವನ್ನು 2023-24 ರಿಂದ ರಾಜ್ಯದ ಶಾಲೆಗಳಲ್ಲಿ ಬೋಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
10 ಮತ್ತು 11ನೇ ತರಗತಿಯ ಪಠ್ಯಪುಸ್ತಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. 10ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಗಳಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ (Democracy and Diversity), ಪ್ರಮುಖ ಹೋರಾಟಗಳು ಮತ್ತು ಚಳುವಳಿಗಳು ಎಂಬ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಸೆಂಟ್ರಲ್ ಇಸ್ಲಾಮಿಕ್ ನೆಲೆಗಳು ಮತ್ತು ಸಂಸ್ಕೃತಿಗಳ ಮುಖಾಮುಖಿ ಎಂಬ ಅಧ್ಯಾಯಗಳನ್ನು 11ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ