ಭಾರತೀಯ ಸಿನಿಮಾ ರಂಗಕ್ಕೆ ಅತ್ಯುತ್ತಮ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್, ಒಂದು ಮಹತ್ವದ ನಿರ್ಧಾರ ತಗೆದುಕೊಂಡಿದೆ ಅನ್ನುವ ವಿಚಾರ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಅದು ಚಿತ್ರೋದ್ಯಮಕ್ಕೆ ಮೂರು ಸಾವಿರ ಕೋಟಿ ಬಂಡವಾಳ ಹೂಡಲಿದೆಯಂತೆ. ಭಾರೀ ಬಜೆಟ್ ಸಿನಿಮಾಗಳ ಜೊತೆಗೆ ಉತ್ತಮ ಬಜೆಟ್ ನಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಲಿದ್ದಾರಂತೆ.
ಕೆಜಿಎಫ್, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿವೆ. ಅತೀ ಹೆಚ್ಚು ಲಾಭವನ್ನೂ ತಂದುಕೊಟ್ಟಿವೆ. ಅಲ್ಲದೇ, ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕನ್ನಡದಲ್ಲಿ ಮೂರು, ಮಲಯಾಳಂನಲ್ಲಿ ಒಂದು ಮತ್ತು ತಮಿಳಿನಲ್ಲಿ ಒಂದು ಸಿನಿಮಾವನ್ನು ಘೋಷಣೆ ಮಾಡಲಾಗಿದೆ. ಹಿಂದಿಯಲ್ಲೂ ಒಂದು ಚಿತ್ರವನ್ನು ಮಾಡುವ ಯೋಜನೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಲಿದೆಯಂತೆ ಹೊಂಬಾಳೆ ಫಿಲ್ಮ್ಸ್.
ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಗೆ ಸಿದ್ಧವಾಗಿದೆ. ಪವನ್ ಕುಮಾರ್ ಮಲಯಾಳಂನಲ್ಲಿ ಭರ್ಜರಿಯಾಗಿಯೇ ಶೂಟಿಂಗ್ ಶುರು ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ದೊಡ್ಮನೆಯ ಕುಡಿ ಯುವರಾಜ್ ನನ್ನು ಲಾಂಚ್ ಮಾಡುತ್ತಿದ್ದಾರೆ. ಜೊತೆಗೆ ಕಾಂತಾರ 2 ಮತ್ತು ಕೆಜಿಎಫ್ ಸಿನಿಮಾದ ಮುಂದುವರೆ ಭಾಗ ಕೂಡ ಸಿನಿಮಾವಾಗಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಹಿಂದಿಯಲ್ಲಿ ಸ್ಟಾರ್ ನಟನ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ
ನಾನಾ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ ಕಿರಗಂದೂರು ಈ ಕುರಿತು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ, ಯಾವೆಲ್ಲ ಸಿನಿಮಾಗಳನ್ನು ಮಾಡಲಿದ್ದಾರೆ? ನಟನಾರು? ನಿರ್ದೇಶಕರಾರು ಅನ್ನುವ ವಿಷಯವನ್ನು ಬಹಿರಂಗ ಪಡಿಸಿಲ್ಲ. ಅಲ್ಲದೇ, ಕೆಲವು ವಿಷಯಗಳನ್ನು ಅವರು ಅಧಿಕೃತಗೊಳಿಸಿಲ್ಲ. ಆದರೂ, ಸಾಕಷ್ಟು ವಿಷಯಗಳು ಗಾಂಧಿನಗರ ಪಡಸಾಲೆಯಲ್ಲಿ ಕೇಳಿ ಬರುತ್ತಿರುದು ಸುಳ್ಳಲ್ಲ.