ಬೆಂಗಳೂರು: ಇಂದು ರಾಜ್ಯದಲ್ಲಿ 97 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ.
ನಿನ್ನೆ ಯಾವುದೇ ಪ್ರಕರಣಗಳ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಹಾಸನದ ಜನತೆ ನಿರಾಳರಾಗಿದ್ದರು. ಇದೀಗ ಪೊಲೀಸ್ ಪೇದೆ ಸೇರಿದಂತೆ 14 ಮಂದಿಗೆ ಸೋಂಕು ತಗುಲಿದೆ. ಇಷ್ಟು ದಿನ ಅಂತರ್ ರಾಜ್ಯದಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆ ಮತ್ತು ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿಗೆ ಕೊರೊನಾ ತಗುಲಿದೆ. ಈಗಾಗಲೇ ಜಿಲ್ಲಾಡಳಿತ ಹಾಸನ ನಗರದ ಸತ್ಯವಂಗಲ ಹಾಗೂ ಉತ್ತರ ಬಡಾವಣೆಯ ಒಂದು ರಸ್ತೆ ಸೀಲ್ಡೌನ್ ಮಾಡಿದೆ.
ಊಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣೆಯ ಕಾನ್ಸ್ಟೇಬಲ್ ಮತ್ತು ಅಜೆಕಾರು ಠಾಣೆಯ ಎಎಸ್ಐಗೆ ಸೋಂಕು ತಗುಲಿದೆ. ಹಾಗಾಗಿ ಕಾರ್ಕಳ ನಗರ ಮತ್ತು ಗ್ರಾಮಾಂತರ, ಅಜೆಕಾರು ಠಾಣೆಗಳನ್ನು ಸ್ಯಾನಿಟೈಸ್ ಮಾಡಿದ್ದ ನಂತರ ಕಾರ್ಯ ನಡೆಸಲು ಚಿಂತಿಸಲಾಗಿದೆ ಅಥವಾ ಪ್ರತ್ಯೇಕ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಠಾಣೆ ಆರಂಭಿಸುವ ಕುರಿತು ಚರ್ಚೆಗಳು ನಡೆದಿವೆ. ವಿದೇಶದಿಂದ ಬೆಂಗಳೂರಿಗೆ ಬಂದಿದ್ದ ಯುವಕನಿಗೂ ಸಹ ಸೋಂಕು ತಗುಲಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ದಾವಣಗೆರೆ 4, ಯಾದಗಿರಿ 6, ಕೊಡಗು 1, ತುಮಕೂರು 2, ಮಂಡ್ಯ 15, ಚಿಕ್ಕಬಳ್ಳಾಪುರ 26, ಉಡುಪಿ 18, ಕಲಬುರಗಿ 6, ಹಾಸನ 14, ಉತ್ತರ ಕನ್ನಡ 2, ವಿಜಯಪುರ 1, ಧಾರವಾಡ 1, ದಕ್ಷಿಣ ಕನ್ನಡ 1 ಪ್ರಕರಣಗಳು ಬೆಳಕಿಗೆ ಬಂದಿವೆ.