– ಕ್ಷಣ ಕ್ಷಣಕ್ಕೂ ಹೇಳಿಕೆ ಬದಲಾಯಿಸ್ತಿರೋ ಆರೋಪಿ
– ನವರಾತ್ರಿಗೆ ನರಬಲಿ ಕೊಟ್ಟಿರುವ ಶಂಕೆ
ರಾಯ್ಪುರ: ನವರಾತ್ರಿ ಪ್ರಯುಕ್ತ ಎಂಟು ದಿನ ಕಟ್ಟುನಿಟ್ಟಿನ ಉಪವಾಸ ವ್ರತ ಆಚರಿಸಿ, 9ನೇ ದಿನ ಪತಿಯೇ ಪತ್ನಿಯನ್ನ ಕೊಂದಿರುವ ಘಟನೆ ಅಂಬಿಕಾಪುರ ಜಿಲ್ಲೆಯ ಸರಗಾಂವ್ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೂಢನಂಬಿಕೆಗೆ ಒಳಗಾಗಿದ್ದ ವ್ಯಕ್ತಿ ಪತ್ನಿಯನ್ನ ದೇವರಿಗೆ ಬಲಿ ನೀಡಿರುವ ಬಗ್ಗೆ ತಿಳಿದು ಬಂದಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ಗ್ರಾಮದಲ್ಲಿ ಮಾಟಮಂತ್ರದ ಕೆಲಸ ಮಾಡಿಕೊಂಡಿದ್ದನು. ದೇವರ ಕೋಣೆಯಲ್ಲಿಯೇ ಮಹಿಳೆ ಶವ ಪತ್ತೆಯಾಗಿದ್ದು, ನರಬಲಿ ನೀಡುವದಕ್ಕಾಗಿ ಆತ ಮಾಡಿಕೊಂಡಿರುವ ಸಿದ್ಧತೆಗಳು ಕೊಲೆಯ ಮಾಹಿತಿ ನೀಡುತ್ತಿವೆ. ಆರೋಪಿ ಒನಕೆಯಿಂದ ಹೊಡೆದು ಪತ್ನಿಯನ್ನ ಕೊಂದಿದ್ದಾನೆ. ಬಂಧಿತ ಕ್ಷಣ ಕ್ಷಣಕ್ಕೊಮ್ಮೆ ತನ್ನ ಹೇಳಿಕೆ ಬದಲಾಯಿಸುವ ಮೂಲಕ ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾನೆ. ಇದನ್ನೂ ಓದಿ: ಹೈ ಟೆಕ್ ವೇಶ್ಯಾವಾಟಿಕೆ- ಓರ್ವ ಸಿನಿಮಾ ನಟಿ ಅರೆಸ್ಟ್, ಮೂವರು ಧಾರಾವಾಹಿ ನಟಿಯರ ರಕ್ಷಣೆ
ಶುಕ್ರವಾರ ರಾತ್ರಿ ಆರೋಪಿ ಮನೆಗೆ ಅತಿಥಿಗಳು ಬಂದಿದ್ದರು. ಊಟದ ಬಳಿಕ ಎಲ್ಲರೂ ಹಿಂದಿರುಗಿದ್ದರು. ಶುಕ್ರವಾರ ರಾತ್ರಿ ಕೊಲೆ ನಡೆದಿದ್ದು, ಬೆಳಗ್ಗೆ ಸೊಸೆಯನ್ನ ಕರೆದ ಆರೋಪಿ ಪತ್ನಿಯ ಶವ ದೇವರ ಕೋಣೆಯಲ್ಲಿ ಬಿದ್ದಿರೋದನ್ನ ಹೇಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅತ್ತೆಯ ಶವ ನೋಡಿದ ಮಹಿಳೆ ಭಯದಿಂದ ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಆರಂಭದಲ್ಲಿಯೇ ಮಹಿಳೆಯ ಪತಿ ಮೇಲೆ ಅನುಮಾನ ವ್ಯಕ್ತವಾಗಿದ್ದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಪತ್ನಿ ಕೊಲೆ ಆರೋಪದಲ್ಲಿ ಪತಿಗೆ ಜೈಲು ಶಿಕ್ಷೆ – 7 ವರ್ಷಗಳ ನಂತ್ರ ಹೆಂಡ್ತಿ ಪತ್ತೆ
ಮನೆಯ ಆವರಣದಲ್ಲಿ ರಕ್ತ ಕಂಡಾಗ ಸ್ಥಳೀಯರಿಗೆ ಮೇಕೆಯನ್ನ ಬಲಿ ನೀಡಿದ್ದಾಗಿ ಸುಳ್ಳು ಹೇಳಿದ್ದಾನೆ. ತದನಂತರ ಮನೆಗೆ ಬಂದ ಕಳ್ಳರು ಪತ್ನಿಯನ್ನ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸದಾ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನು. ಹೀಗಾಗಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಟಿಐ ಅನೂಪ್ ಎಕ್ಕಾ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ಕೊಲೆಗೆ ಸುಪಾರಿ ಕೊಟ್ಟ ಹೆಡ್ ಕಾನ್ ಸ್ಟೇಬಲ್ – ಕೊಲ್ಲಲು ಬಂದವನ ಮನಕರಗಿ ಪೊಲೀಸ್ರಿಗೆ ಶರಣು