ನವದೆಹಲಿ: 5 ಪೊಲೀಸರಿಗೆ ಹಾಗೂ ಗೃಹ ರಕ್ಷಕರೊಬ್ಬರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಪೂರ್ವ ದೆಹಲಿಯ ಶಾಹದಾರಾದ ಪೊಲೀಸ್ ಠಾಣೆಯಲ್ಲೇ ನಡೆದಿದೆ.
ಭರತ್ ಭಾಟಿ(28) ಚಾಕು ಇರಿದ ಆರೋಪಿ. ಶಹದಾರದ ಸೈಬರ್ ಪೊಲೀಸ್ ಠಾಣೆಯ ಮೂರನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. ಹೆಡ್ ಕಾನ್ಸ್ಟೆಬಲ್ ದೀಪಕ್, ಕಾನ್ಸ್ಟೆಬಲ್ಗಳಾದ ಅಮಿತ್, ಮನೀಶ್, ನರೇಶ್ ಸುನೀಲ್ ಮತ್ತು ಹೋಂಗಾರ್ಡ್ ರವಿ ಗಾಯಗೊಂಡವರು. ಘಟನೆ ನಡೆದಾಗ 8 ಮಹಿಳೆಯರು ಸೇರಿದಂತೆ 20 ಜನರು ಪೊಲೀಸ್ ಠಾಣೆಯೊಳಗೆ ಇದ್ದರು.
ಭರತ್ ಪೊಲೀಸ್ ಠಾಣೆಗೆ ಪ್ರವೇಶಿಸಿ ವೀಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದನು. ಪೊಲೀಸರು ಆತನನ್ನು ತಡೆದು ವೀಡಿಯೋ ರೆಕಾರ್ಡ್ ಮಾಡಿದ ಕಾರಣವನ್ನು ಕೇಳಿದಾಗ, ಭರತ್ ಇದ್ದಕ್ಕಿದ್ದಂತೆ ಚಾಕುವನ್ನು ತೆಗೆದುಕೊಂಡು ಹಲವಾರು ಸಿಬ್ಬಂದಿಯನ್ನು ಒಬ್ಬರ ನಂತರ ಒಬ್ಬರಂತೆ ಇರಿದಿದ್ದಾನೆ. ಇದನ್ನೂ ಓದಿ: ಶಾಸಕರು ಆಯ್ತು ಈಗ ಶಿವಸೇನೆ ಸಂಸದರಿಂದಲೂ ಬಂಡಾಯ
ನಂತರ ಆತ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಗೇಟ್ಗಳನ್ನು ಮುಚ್ಚಿ, ಆತನ ಬಳಿ ಇದ್ದ ಚಾಕುವನ್ನು ಕಸಿದುಕೊಂಡಿದ್ದಾರೆ. ನಂತರ ಆತನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕಾರ್ಯವೈಖರಿ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಮುಂದಾದ ಗ್ರಾ.ಪ ಅಧ್ಯಕ್ಷೆ