ಚಿಕ್ಕಮಗಳೂರು: ಮಧ್ಯಪ್ರದೇಶ ಹಾಗೂ ಅಸ್ಸಾಂನಿಂದ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರಲ್ಲಿ ಮೂವರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಸುತ್ತಮುತ್ತಲಿನ ಎಸ್ಟೇಟಿನಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.
ಮೂವರು ಕಾರ್ಮಿಕರ ರಕ್ತದ ಮಾದರಿಯನ್ನ ಶಿವಮೊಗ್ಗದ ವೈರಸ್ ಪರಿಶೋಧನ ಪ್ರಯೋಗಾಲಯಕ್ಕೆ(ವಿಡಿಎಲ್) ಕಳುಹಿಸಲಾಗಿದೆ. ಮೂವರು ಸೋಂಕಿತರಲ್ಲಿ ಇಬ್ಬರು ಮಧ್ಯಪ್ರದೇಶಕ್ಕೆ ಹಿಂದಿರುಗಿದ್ದು, ಓರ್ವ ಮಹಿಳೆಗೆ ಎನ್.ಆರ್ ಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ
ತೋಟದ ಉಳಿದ ಕಾರ್ಮಿಕರಿಗೂ ಸೋಂಕು ಹರಡದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಮಂಗನ ಕಾಯಿಲೆ ಪತ್ತೆಯಾಗಿರೋ ಜಾಗವನ್ನ ಹಾಟ್ ಸ್ಪಾಟ್ ಎಂದು ಗುರುತಿಸಿರೋ ಜಿಲ್ಲಾಡಳಿತ, ಆ ಜಾಗದ ಐದು ಕಿ.ಮೀ ಸುತ್ತಳತೆಯಲ್ಲಿ ಕೆಎಫ್ಡಿ ರೋಗ ನಿರೋಧಕ ಔಷಧಿಯನ್ನ ಸಿಂಪಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿ ಸುಭಾಷ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಮಹಿಳೆಯಿಂದಲೂ ರೋಗ ಇನ್ನಿತರರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಡಬೂರು ಸುತ್ತಮುತ್ತಲಿನ ಗ್ರಾಮಗಳ 6ರಿಂದ 65 ವರ್ಷದ ಎಲ್ಲಾ ವಯೋಮಾನದವರಿಗೂ ಕೆಎಫ್ಡಿ ನಿರೋಧಕ ಲಸಿಕೆ ಹಾಕಲಾಗ್ತಿದೆ.