ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಮ್ರಾನ್ ಶೇಷರಾವ್ 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಿಮ್ರಾನ್ ಶೇಷರಾವ್ ಬೆಂಗಳೂರಿನ ಎನ್ಎಂಕೆಆರ್ವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಇವರು ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕರೆ ಮಾಡಿ ಶುಭ ಕೋರಿದ್ದಾರೆ. ಈ ವೇಳೆ ಎಂಜಿನಿಯರಿಂಗ್ ಓದುವ ಆಸೆ ಇದೆ ಎಂದು ತನ್ನ ಕನಸನ್ನು ವಿದ್ಯಾರ್ಥಿನಿ ಸಚಿವರಿಗೆ ತಿಳಿಸಿದರು.
ಇನ್ನುಳಿದಂತೆ ವಾಣಿಜ್ಯ ವಿಭಾಗದಲ್ಲಿ 4 ವಿದ್ಯಾರ್ಥಿಗಳು 600 ಅಂಕಗಳಿಗೆ 596 ಅಂಕ ಗಳಿಸಿ ಟಾಪರ್ಸ್ ಆಗಿದ್ದು, ಬೆಂಗಳೂರಿನ ಜೈನ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಾನವ ವಿನಯ್ ಕೇಜ್ರಿವಾಲ್, ಬೆಂಗಳೂರಿನ ಬಿಜಿಎಸ್ ಕಾಲೇಜಿನ ನೀಲು ಸಿಂಗ್, ಬೆಂಗಳೂರಿನ ಸೆಂಟ್ ಕ್ಲಾರಟ್ ಪಿಯು ಕಾಲೇಜಿನ ಆಕಾಶ್ ದಾಸ್ ಹಾಗೂ ಚಿಕ್ಕಬಳ್ಳಾಪುರ ಕಾಲೇಜಿನ ನೇಹಾ ಈ ಸಾಧನೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲ್ಲ: ಬಿಸಿ ನಾಗೇಶ್
ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ಬಳ್ಳಾರಿ ಕಾಲೇಜಿನ ಶ್ವೇತಾ ಭೀಮಾ ಶಂಕರ್ ಭೈರಗೊಂಡ ಹಾಗೂ ಮಡಿವಾಳರಾ ಸಹನಾ 600 ಅಂಕಗಳಿಗೆ 594 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2nd PUC ಫಲಿತಾಂಶ ಪ್ರಕಟ- 61.88% ಮಕ್ಕಳು ಪಾಸ್, ವಿದ್ಯಾರ್ಥಿನಿಯರೇ ಮೇಲುಗೈ