ಬೆಂಗಳೂರು: ಆಹಾರ ಆರಿಸಿ ಬಂದಿದ್ದ ಕಾಡಾನೆ ದಾಳಿಗೆ ಇಬ್ಬರು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಇಂದು ಬೆಳಗಿನ ಜಾವ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕಗ್ಗಲೀಪುರ ವಲಯದ ಅರಣ್ಯ ಪ್ರದೇಶದಲ್ಲಿರುವ ಸಿಆರ್ಪಿಎಫ್ ಸೇನಾ ಶಿಬಿರದ ಬಳಿ ಕಾಡಾನೆಗಳು ಆಹಾರಕ್ಕಾಗಿ ಲಗ್ಗೆಯಿಟ್ಟಿವೆ. ಈ ವೇಳೆ ಪುಟ್ಟಪ್ಪ (35) ಮತ್ತು ಮೂರ್ತಿ (52) ಎಂಬವರು ಆನೆಗಳ ದಾಳಿಗೆ ಸಿಲುಕಿ ದುರ್ಮರಣ ಹೊಂದಿದ್ದಾರೆ.3
ಕಗ್ಗಲೀಪುರ ವಲಯದ ಅರಣ್ಯ ಪ್ರದೇಶದಲ್ಲಿರುವ ಸಿಆರ್ಪಿಎಫ್ ಸೇನಾ ಶಿಬಿರದ ಬಳಿ ಕಾಡಾನೆಗಳು ಆಹಾರಕ್ಕಾಗಿ ಬಂದಾಗ ಸಹಜವಾಗಿಯೇ ಕಾಡಾನೆಗಳಿಗೆ ನೀರು ಅಥವಾ ಆಹಾರ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆನೆಗಳು ಸ್ಥಳದಲ್ಲಿದ್ದ ಮೂರ್ತಿ ಅವರ ಮೇಲೆ ಎರಗಿವೆ. ಇದರಿಂದ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಯುವಕರಾದ ಪುಟ್ಟಪ್ಪ ಓಡಿಹೋದರೂ ಆನೆಗಳು ದಾಳಿ ನಡೆಸಿ ಪುಟ್ಟಪ್ಪರನ್ನು ಗಂಭೀರವಾಗಿ ಗಾಯಗೊಳಿಸಿದ್ದವು. ಪುಟ್ಟಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕಗ್ಗಲೀಪುರ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂರ್ತಿ ತಮಿಳುನಾಡು ಮೂಲದವರು ಮತ್ತು ಪುಟ್ಟಪ್ಪ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ.