ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ರಾಮ್ ಹಲ್ವಾ (Ram Halwa) ತಯಾರಿಸಲು ನಾಗ್ಪುರದ ಹೆಸರಾಂತ ಬಾಣಸಿಗರೊಬ್ಬರು ಬೃಹತ್ ಗಾತ್ರದ 1,800 ಕೆಜಿಯ ಕಡಾಯಿಯೊಂದನ್ನು ಸಿದ್ಧಪಡಿಸಿದ್ದಾರೆ. ಈ ಕಡಾಯಿಯನ್ನು ಹನುಮಾನ್ ಕಡಾಯಿ (Hanuman Kadhai) ಎಂದು ಅವರು ಕರೆದಿದ್ದಾರೆ.
ಈ ಕಡಾಯಿ 6.5 ಅಡಿ ಎತ್ತರವಿದ್ದು, 15 ಅಡಿ ವ್ಯಾಸವಿದೆ. ಸುಮಾರು 15,000 ಲೀಟರ್ ಸಾಮಥ್ರ್ಯ ಹೊಂದಿರುವ ಕಡಾಯಿಯಲ್ಲಿ ಸುಮಾರು 7 ಟನ್ ರಾಮ್ ಹಲ್ವಾ ತಯಾರಿಸಲಾಗುತ್ತದೆ. ಇದಕ್ಕಾಗಿ 900 ಕೆಜಿ ರವೆ, 1000 ಕೆಜಿ ತುಪ್ಪ, 1000 ಕೆಜಿ ಸಕ್ಕರೆ, 2000 ಲೀಟರ್ ಹಾಲು, 2500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪುಡಿಯನ್ನು ಬಳಸಿಕೊಳ್ಳಲಾಗುತ್ತದೆ. ಬಾಲ ರಾಮನಿಗೆ ಹಲ್ವಾವನ್ನು ಅರ್ಪಿಸಿದ ನಂತರ, 1 ಲಕ್ಷದಿಂದ 1.5 ಲಕ್ಷ ಭಕ್ತರಿಗೆ ಪ್ರಸಾದವಾಗಿ ನೀಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ರಾಮನ ಪ್ರಾಣಪ್ರತಿಷ್ಠೆಗೆ ದಿನಗಣನೆ- ಸೀತಾ ಮಾತೆಯ ರಕ್ಷಣೆಗೆ ಜಟಾಯು ಹೋರಾಡಿದ್ದ ಸ್ಥಳಕ್ಕೆ ಮೋದಿ ಭೇಟಿ
ಈ ಕಡಾಯಿಯನ್ನು ಅಯೋಧ್ಯೆಗೆ ಸಾಗಿಸಿ ನಾಗ್ಪುರದ ಗುರುತಾಗಿ ಅಲ್ಲಿಯೇ ಇರಿಸಲಾಗುತ್ತದೆ. 500 ವರ್ಷಗಳ ಭಗವಾನ್ ರಾಮ ತನ್ನ ಮನೆಗೆ ಮರಳುತ್ತಿರುವುದನ್ನು ಸಂಭ್ರಮಿಸಲು ಅಯೋಧ್ಯೆಯಲ್ಲಿ ಈ ಹಲ್ವಾ ತಯಾರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಜ.26ರ ಬಳಿಕ ತಯಾರಿಸುವಂತೆ ಸೂಚಿಸಿದ್ದಾರೆ. ಈಗ ಜನವರಿ 29-31ರ ಸುಮಾರಿಗೆ ರಾಮ್ ಹಲ್ವಾ ಮಾಡಲಾಗುತ್ತದೆ ಎಂದು ಬಾಣಸಿಗ ವಿಷ್ಣು ಮನೋಹರ್ ಹೇಳಿದ್ದಾರೆ.
ಜನವರಿ 22 ರಂದು ಬಾಲರಾಮನ ಪ್ರಾಣಪ್ರತಿಷ್ಠೆಗೆ ಸಕಲ ಸಿದ್ಧತೆಗಳು ನಡೆದಿವೆ. ಈಗಾಗಲೇ ಕಾರ್ಯಕ್ರಮದ ವಿಧಿವಿಧಾನಗಳು ಆರಂಭವಾಗಿದೆ. ಈ ಮೂಲಕ ಕೋಟ್ಯಂತರ ರಾಮ ಭಕ್ತರ ಕನಸು ನನಸಾಗಲು ದಿನಗಣನೆ ಆರಂಭವಾಗಿದೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ