ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಗದ್ದೆ ಗ್ರಾಮದಲ್ಲಿ ಮೈತುಂಬಾ ಪೊರೆ ತುಂಬಿಕೊಂಡಿದ್ದ ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಸೆರೆಹಿಡಿಯಲು ಬಂದವರ ಬೆವರಿಳಿಸಿದೆ.
ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಕಳೆದ ಒಂದು ವರ್ಷದಿಂದ ಬಾಳೆಗದ್ದೆ ಗ್ರಾಮದ ತೋಟವೊಂದರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಕಂಡು ತೋಟದ ಕೆಲಸಗಾರರು ತುಂಬಾ ಭಯಪಟ್ಟಿದ್ದರು. ಹಲವು ಬಾರಿ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಯತ್ನಿಸಿದರೂ ಅದು ತಪ್ಪಿಸಿಕೊಂಡು ಕಣ್ಮರೆಯಾಗುತ್ತಿತ್ತು. ಆದರೆ ಬುಧವಾರ ಸರ್ಪವನ್ನು ಸ್ನೇಕ್ ಮಹಮದ್ ಎಂಬವರು ಸೆರೆಹಿಡಿದಿದ್ದಾರೆ.
ಕಾಳಿಂಗ ಸರ್ಪವನ್ನು ಮಹಮದ್ ಅವರು ಸುಮಾರು ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಕಷ್ಟಪಟ್ಟು ಸೆರೆಹಿಡಿದಿದ್ದಾರೆ. ಮೈತುಂಬಾ ಪೊರೆ ಹೊಂದಿದ್ದ ಕಾರಣಕ್ಕೆ ಕಾಳಿಂಗ ಸರ್ಪ ಕೆಲಕಾಲ ಸೆರೆ ಸಿಗೋದಕ್ಕೂ ಸತಾಯಿಸಿ ಉರಗ ತಜ್ಞರ ಬೆವರಿಳಿಸಿದೆ. ಕಾಳಿಂಗ ಸರ್ಪ ಒಮ್ಮೆ ಕಣ್ಣಿಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಮಾಯವಾಗಿ ಸತಾಯಿಸಿದಲ್ಲದೆ ಬಾಯ್ತೆರೆದು, ಉಸಿರುಬಿಡುತ್ತಾ ಉರಗ ತಜ್ಞರನ್ನು ಹೆದರಿಸಲು ಪ್ರಯತ್ನಿಸಿದೆ. ಆದರೂ ಕೊನೆಗೆ ದೈತ್ಯ ಕಾಳಿಂಗ ಸರ್ಪವನ್ನು ಮಹಮದ್ ಅವರು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಈ ರೋಚಕ ದೃಶ್ಯವನ್ನು ನೋಡಲು ಜನರು ತೋಟದ ಬಳಿ ಬಂದಿದ್ದರು. ಅಷ್ಟೇ ಅಲ್ಲದೆ ಅವರಲ್ಲೊಬ್ಬರು ಮೊಬೈಲ್ನಲ್ಲಿ ಕಾಳಿಂಗವನ್ನು ಹಿಡಿದಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಹಾಗೆಯೇ ಅದರ ಜೊತೆ ಜನರು ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಹಾವಿನ ಪೊರೆ ತೆಗೆದು ಅದನ್ನು ಚಾರ್ಮಾಡಿ ಅರಣ್ಯಕ್ಕೆ ಮಹಮದ್ ಅವರು ಸುರಕ್ಷಿತವಾಗಿ ಬಿಟ್ಟಿದ್ದಾರೆ.
https://www.youtube.com/watch?v=l2Bb_-Qc2ow
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv