– ಕಣ್ಣು ಕೆಂಪಾಗಿಸಿತ್ತು ಮೈದುನನ ನಿರ್ಧಾರ
ಲಕ್ನೋ: 10 ಮದುವೆಯಾದರೂ ಮಕ್ಕಳಾಗದ ವ್ಯಕ್ತಿ ಅತ್ತಿಗೆಯಿಂದಲೇ ಕೊಲೆಯಾದ ಘಟನೆ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಬೋಜಿಪುರದಲ್ಲಿ ನಡೆದಿದೆ.
55 ವರ್ಷದ ಜಗನ್ ಲಾಲ್ ಕೊಲೆಯಾದ ವ್ಯಕ್ತಿ. ಜನವರಿ 20ರಂದು ಜಗನ್ ಕತ್ತು ಹಿಸುಕಿ ಕೊಲೆಗೈಯಲಾಗಿತ್ತು. ಸದ್ಯ ಪ್ರಕರಣವನ್ನ ಭೇದಿಸಿರುವ ಪೊಲೀಸರು ಜಗನ್ ಅತ್ತಿಗೆ ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ. ಜಗನ್ 10 ಪತ್ನಿಯರ ಪೈಕಿ ಕೆಲವರು ಮೃತಪಟ್ಟಿದ್ರೆ, ಕೆಲವರು ಈತನಿಂದ ದೂರವಾಗಿದ್ದಾರೆ. ಇಬ್ಬರು ಪತ್ನಿಯರ ಜೊತೆ ಜಗನ್ ಗ್ರಾಮದಲ್ಲಿ ವಾಸವಾಗಿದ್ದನು. ಸಂತಾನಕ್ಕಾಗಿ ಜಗನ್ ಒಟ್ಟು 10 ಮದುವೆಯಾಗಿದ್ದರು.
ಸಾವಿಗೆ ಕಾರಣ ‘ಆ’ ನಿರ್ಧಾರ: ಯೆಸ್, 10 ಮದುವೆಯಾದ ಜಗನ್ ತನಗೆ ಮಕ್ಕಳಾಗಲ್ಲೆಂಬ ಸತ್ಯ ಅರಿತಕೂಡಲೇ ತನ್ನ ಕೋಟ್ಯಂತರ ರೂ. ಮೌಲ್ಯದ 14 ಎಕರೆ ಜಮೀನು ತಮ್ಮನ್ನ ನೋಡಿಕೊಳ್ಳುತ್ತಿದ್ದ ಸಂಬಂಧಿ ಯುವಕನ ಹೆಸರಿಗೆ ಬರೆಯುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದರು. ಈ ವಿಷಯ ಕೇಳಿದ ಜಗನ್ ಅತ್ತಿಗೆ ಮುನ್ನಿದೇವಿಯ ಚಡಪಡಿಸಿದ್ದಳು. 14 ಎಕರೆ ಜಮೀನು ಬೇರೆಯವರ ಪಾಲಾಗೋದನ್ನ ತಡೆಯಲು ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು.
ಆಸ್ತಿಗಾಗಿ ಹಂತಕಿಯಾದ ಅತ್ತಿಗೆ: ತನ್ನ ಪರಿಚಯದ ಕೆಲ ಯುವಕರಿಗೆ ಹಣದಾಸೆ ತೋರಿಸಿದ ಮುನ್ನಿದೇವಿ ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು. ಜನವರಿ 20ರಂದು ರಾತ್ರಿ ಒಂಟಿಯಾಗಿ ಹೊರಟಿದ್ದ ಜಗನ್ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಕೊಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೊಲೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ತಿಗಾಗಿ ಹಂತಕಿಯಾಗಿದ್ದ ಮುನ್ನಿದೇವಿಯನ್ನ ಕತ್ತಲು ಮನೆಗೆ ಅಟ್ಟಿದ್ದಾರೆ.
ಕೆಂಪಾಗಿತ್ತು ಮುನ್ನಿದೇವಿ ಕಣ್ಣು: ಪ್ರಕರಣದ ತನಿಖೆ ನಡೆಸಲು ಬೋಜಿಪುರಿ ಠಾಣೆಯ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 10 ಮದುವೆಯಾದರೂ ಮಕ್ಕಳಗಾದ ಕಾರಣ ಜಗನ್ ತಮಗೆ ಆಸರೆಯಾಗಿದ್ದ ಯುವಕನ ಹೆಸರಿಗೆ ಆಸ್ತಿ ಬರೆಯಲು ನಿರ್ಧರಿಸಿದ್ದರು. ಈ ವಿಷಯ ಅತ್ತಿಗೆ ಮುನ್ನಿದೇವಿಯ ಕಣ್ಣು ಕೆಂಪಾಗಿಸಿತ್ತು. ಜಮೀನಿಗಾಗಿ ಮೈದುನ ಕೊಲೆಗೆ ಸುಪಾರಿ ನೀಡಿದ್ದಳು. ಸದ್ಯ ದೇವ್ಸಿಂಗ್, ಪ್ರಹ್ಲಾದ್, ದರ್ಶನ್ ಸಿಂಗ್ ಮತ್ತು ಮುನ್ನಿದೇವಿಯನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್ಎಸ್ಪಿ ರೋಹಿತ್ ಸಿಂಗ್ ಹೇಳಿದ್ದಾರೆ.