ಬೆಂಗಳೂರು: ಪ್ರತಿ ತಿಂಗಳು ಪ್ರತಿಯೊಬ್ಬ ಆಟೋ ಚಾಲಕ 500 ರೂ. ಉಳಿತಾಯ ಮಾಡಿದರೆ, ಸಂಘಕ್ಕೆ ವಾರ್ಷಿಕ 1 ಲಕ್ಷ ರೂ. ಸಹಾಯಧನ ನೀಡುತ್ತೇವೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರಮಿಕ ವರ್ಗವಾದ ನೀವು ಆರ್ಥಿಕ ಉಳಿತಾಯಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು. ಇದನ್ನೂ ಓದಿ: ನ್ಯುಮೋನಿಯಾದಿಂದ ಮೃತಪಟ್ಟ ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಪತಿ!
ನಿಮ್ಮದೇ ಆದ ಸಂಘ ಮಾಡಿಕೊಂಡು ಅದರಲ್ಲಿ ಉಳಿತಾಯ ಮಾಡುತ್ತ ಬನ್ನಿ. ಪ್ರತಿ ತಿಂಗಳು ಪ್ರತಿಯೊಬ್ಬ ಆಟೋಚಾಲಕ 500 ರೂ ಉಳಿತಾಯ ಮಾಡಿದರೆ ನಾನು ಸಂಘಕ್ಕೆ ವರ್ಷಕ್ಕೆ ಒಂದು ಲಕ್ಷ ರೂ. ಸಹಾಯಧನ ನೀಡುತ್ತೇನೆ ಎಂದರು. ಇದನ್ನೂ ಓದಿ: ದಕ್ಷಿಣ ಕನ್ನಡ: ದಾರಿಯಲ್ಲಿ ಐದು ಗ್ರಾನೈಡ್ ಪತ್ತೆ!
ಇದೇ ವೇಳೆ ನಟ ಪುನೀತ್ ಅವರನ್ನು ಸ್ಮರಿಸಿದ ಸಚಿವರು, ಪುನೀತ್ ರಾಜ್ಕುಮಾರ್ ಅವರ ನಿಧನದ ನೋವಿನಿಂದ ನಾನೂ ಸೇರಿದಂತೆ ನಾಡಿನ ಅಪಾರ ಅಭಿಮಾನಿಗಳು, ಹಿತೈಷಿಗಳು ಹೊರಬಂದಿಲ್ಲ. ಅವರ ನಿಧನ ರಾಜ್ಯಕ್ಕೆ ಮತ್ತು ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ವಿಷಾದಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗ ಸೇರಿದಂತೆ ವಿವಿಧ ಕನ್ನಡ ಪರ ಮತ್ತು ಆಟೋಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.