ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ(103) ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದೊರೆಸ್ವಾಮಿ ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೇ 6ಕ್ಕೆ ಕೋವಿಡ್ ದೃಢ ಪಟ್ಟಿತ್ತು. ಕೊರೊನಾ ಪಾಸಿಟಿವ್ ಆದಾಗ ಆಕ್ಸಿಜನ್ ಬೆಡ್ ಅಗತ್ಯವೂ ಇಲ್ಲದೆ ದೊರೆಸ್ವಾಮಿ ಚೇತರಿಸಿಕೊಂಡಿದ್ದರು. 13ಕ್ಕೆ ಡಿಸ್ಚಾರ್ಜ್ ಆಗಿದ್ದರು. ಮತ್ತೆ ನಾಲ್ಕು ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಕೊರೊನಾದಿಂದ ಗುಣಮುಖರಾದ 4 ದಿನದ ಬಳಿಕ ದೊರೆಸ್ವಾಮಿ ಅವರಿಗೆ ಮತ್ತೆ ಉಸಿರಾಟದ ತೊಂದರೆ ಎದುರಾಗಿತ್ತು. ಹಿನ್ನೆಲೆಯಲ್ಲಿ 8 ದಿನದಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಮತ್ತೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಪದೇ ಪದೇ ನಂಗೆ ವಯಸ್ಸಾಗಿದೆ. ಆಸ್ಪತ್ರೆಗೆ ಬರಲ್ಲ, ನನ್ನ ಬೆಡ್ ಯುವಕರಿಗೆ ಉಪಯೋಗವಾಗಲಿ ಅಂತ ದೊರೆಸ್ವಾಮಿ ಈ ಹಿಂದೆ ಹೇಳಿದ್ದರು. ಈ ವೇಳೆ ಜಯದೇವ ವೈದ್ಯ ಡಾ ಮಂಜುನಾಥ್ ಅವರು, ಬೆಡ್ ಕೊರತೆ ಇಲ್ಲ ಅಂತ ಮನವೊಲಿಸಿ ಮತ್ತೆ ಉಸಿರಾಟದ ತೊಂದರೆ ಬಂದಾಗ ಆಸ್ಪತ್ರೆಗೆ ದಾಖಲು ಮಾಡಿದ್ರು.