ಮಂಡ್ಯ: ಸಚಿವ ನಾರಾಯಣಗೌಡ ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ನಾಗಮಂಗಲದ ಬಂಕಾಪುರ ಸಮೀಪದಲ್ಲಿ ನಡೆದಿದೆ.
ಸಚಿವ ನಾರಾಯಣಗೌಡ ಅವರು ಇಂದು ಬೆಂಗಳೂರು ಜಲಸೂರು ರಸ್ತೆ ಮಾರ್ಗವಾಗಿ ಕೆ.ಆರ್.ಪೇಟೆಗೆ ತೆರಳುತ್ತಿದ್ದರು. ಇತ್ತ ಬಂಕಾಪುರದ ಬಳಿ ಕಾಮಗಾರಿ ನಡೆಯುತ್ತಿದ್ದು, ಸಚಿರ ಕಾರಿನ ಮುಂದೆಯೇ ಬಂಡೆ ಸಿಡಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬೆಂಗಳೂರು ಜಲಸೂರು ರಸ್ತೆ ಕಾಮಗಾರಿ ವೇಳೆ ಹಿನ್ನೆಲೆ ಹಗಲಿನಲ್ಲೇ ಕಲ್ಲು ಬಂಡೆ ಸಿಡಿಸಲಾಗಿದೆ. ಅಷ್ಟೇ ಅಲ್ಲದೆ ಸ್ಫೋಟಕ್ಕೂ ಮುನ್ನ ರಸ್ತೆ ಸಂಚಾರ ಬಂದ್ ಮಾಡಿಸಿಲ್ಲ. ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಬಂಡೆಯನ್ನು ಸ್ಫೋಟಿಸಿ ಬೇಜವಾಬ್ದಾರಿ ತೋರಿದ ಗುತ್ತಿಗೆದಾರನ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಕೋಪಗೊಂಡಿದ್ದ ಸಚಿವರ ನಾರಾಯಣಗೌಡ ಅವರು, ತಕ್ಷಣವೇ ಗುತ್ತಿಗೆದಾರ ಮೈಸೂರಿನ ಶ್ರೀನಿವಾಸ್ ರಾಜ್ ಅವರನ್ನು ವಶಕ್ಕೆ ಪಡೆಯುವಂತೆ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಪೊಲೀಸರು ಶ್ರೀನಿವಾಸ್ ರಾಜ್ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.