ಚಿಕ್ಕಬಳ್ಳಾಪುರ: ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸ್ವಗ್ರಾಮದ ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದ ಮನೆ ಕೆಲಸದಾಕೆಗೂ ಕೊರೊನಾ ಸೋಂಕು ತಗುಲಿರುವ ಮಾಹಿತಿ ಸಿಕ್ಕಿದೆ.
ಪೇರೇಸಂದ್ರ ಗ್ರಾಮದ ನಿವಾಸದಲ್ಲಿ ಅಡುಗೆ ಕೆಲಸ ಸೇರಿದಂತೆ ಮನೆ ಕೆಲಸ ಮಾಡುತ್ತಿದ್ದ ಸರಿ ಸುಮಾರು 55 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮಹಿಳೆ ವಾಸವಿದ್ದ ಮನೆ ಹಾಗೂ ಅಕ್ಕಪಕ್ಕದ ಮನೆಗಳನ್ನ ಸೀಲ್ಡೌನ್ ಮಾಡಲಾಗಿದೆ. ಇನ್ನೂ ಮಹಿಳೆಯ ಜೊತೆ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಉಳಿದಂತೆ ಸಚಿವರ ತಂದೆ ಸೇರಿದಂತೆ ಪತ್ನಿ ಹಾಗೂ ಮಕ್ಕಳಿಗೂ ಕೊರೊನಾ ಸೋಂಕು ದೃಢವಾಗಿತ್ತು. ಹೀಗಾಗಿ ಮುಂಜಾಗ್ರತೆಯಾಗಿ ಈ ಮಹಿಳೆಯ ಸ್ವಾಬ್ ಟೆಸ್ಟ್ ಮಾಡಲಾಗಿತ್ತು.
ಇಂದು 1 ಸಾವು: ಜಿಲ್ಲೆಯಲ್ಲಿ ಕೊರೊನಾಗೆ ಇಂದು ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಚಿಕ್ಕಬಳ್ಳಾಪುರ ನಗರದ 9ನೇ ವಾರ್ಡ್ ನಿವಾಸಿ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 58 ವರ್ಷದ ಉಪನ್ಯಾಸಕರು ಕೋವಿಡ್ಗೆ ಬಲಿಯಾಗಿದ್ದಾರೆ.