ಬೆಂಗಳೂರು: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರಾದ್ಯಂತ ಇಂದು ಬೆಳಗಿನ ಜಾವ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವೈಟ್ಫೀಲ್ಡ್ ವಿಭಾಗದಲ್ಲಿ ಡಿಸಿಪಿ ದೇವರಾಜ್ ನೇತೃತ್ವದಲ್ಲಿ 116 ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ 82 ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, 15 ರೌಡಿಗಳ ವಿರುದ್ಧ ಸಿಆರ್ಪಿಸಿ ಸೆಕ್ಷನ್ 110 ರ ಅಡಿ ಪ್ರಕರಣ ದಾಖಲಿಸಲಾಗಿದೆ. ದಾಳಿ ವೇಳೆ ಸುಮಾರು ಎರಡೂವರೆ ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಮೂವರು ರೌಡಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹದೇವಪುರ ಠಾಣಾ ಇಬ್ಬರು ರೌಡಿಗಳ ಮನೆಯಲ್ಲಿ ಪರಿಶೀಲನೆ ವೇಳೆ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಶಸ್ತಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಪ್ರಮುಖ ರೌಡಿಶೀಟರ್ಗಳಾದ ಮಾರತಳ್ಳಿ ಪೊಲೀಸ್ ಠಾಣೆಯ ರೌಡಿ ರೋಹಿತ್, ಕೆಆರ್ ಪುರಂ ಗಿರಿ ಅಲಿಯಾಸ್ ಗುಬ್ಬಚ್ಚಿ, ಬೆಳ್ಳಂದೂರು ಬೋಗನಹಳ್ಳಿ ಕೀರ್ತಿ, ಮಾರತ್ತಹಳ್ಳಿ ಸೋಮು ಸೇರಿದಂತೆ ಪ್ರಮುಖ ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಎಲ್ಲಾ ರೌಡಿಗಳನ್ನು ವೈಟ್ಫೀಲ್ಡ್ ಡಿಸಿಪಿ ಕಚೇರಿಗೆ ಪೆರೇಡ್ ಮಾಡಿಸಿ ಕೆಲವರ ಮೇಲೆ ಪ್ರಕರಣ ದಾಖಲು ಮಾಡಿ ಉಳಿದವರನ್ನು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಇದನ್ನೂ ಓದಿ: ನಂದಿಗಿರಿಧಾಮದಲ್ಲಿ ಪ್ರೇಮಿಗಳಿಂದ ಚುಂಬನ – ಕೊರೊನಾ ರೂಲ್ಸ್ ಬ್ರೇಕ್
ಕಾರ್ಯಚರಣೆಯಲ್ಲಿ ಎಸಿಪಿ ಮನೋಜ್ ಕುಮಾರ್ ಸೇರಿದಂತೆ ವೈಟ್ಫೀಲ್ಡ್ ಡಿವಿಜನ್ನ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಗಳು ಪಾಲ್ಗೊಂಡಿದ್ದರು.