ಬೆಂಗಳೂರು: ಎಚ್ ವಿಶ್ವನಾಥ್ ಅವರಿಗೆ ಅರೆ ಹುಚ್ಚು ಹಿಡಿದಿದೆ. ಅವರು ರೋಡಲ್ಲಿ ಓಡಾಡುವ ಮಾತನಾಡುವ ಅರೆ ಹುಚ್ಚ ಆಗಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ಹೇಳಿಕೆ ಅಶಿಸ್ತನ್ನು ತೋರಿಸುತ್ತದೆ. ತಿಂದ ಮನೆಗೆ ದ್ರೋಹ ಬಗೆಯುವುದು ಅವರ ಹುಟ್ಟು ಗುಣ ಎಂದು ಕಿಡಿಕಾರಿದರು.
ಸಾರಾ ಮಹೇಶ್ ಅವರನ್ನು ಒಮ್ಮೆ ಹೊಗಳುತ್ತಾರೆ ಮತ್ತೆ ವಿರೋಧ ಮಾಡುತ್ತಾರೆ. ಕೊರೊನಾಗಿಂತಲೂ ಕೆಲವರು ಭಯಂಕರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಯಾವುದೇ ಮದ್ದಿಲ್ಲ. ಯಡಿಯೂರಪ್ಪನವರೇ ಮುಂದಿನ 2 ವರ್ಷ ಮುಂದುವರಿಯಬೇಕು. ಮುಂದಿನ ಚುನಾವಣಾ ನೇತೃತ್ವವನ್ನು ಅವರೇ ವಹಿಸಬೇಕು ಎಂದು ಅವರು ಒತ್ತಾಯ ಮಾಡಿದರು. ಇದನ್ನೂ ಓದಿ : ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್
ವಿಶ್ವನಾಥ್ ಅವರಿಗೆ ಇಷ್ಟೊಂದು ತಿಕ್ಕಲು ಬುದ್ಧಿ ಇದೆ ಎನ್ನುವುದು ಗೊತ್ತಿರಲಿಲ್ಲ. ಇದು ಅವರ ರಾಜಕೀಯ ಜೀವನದ ಕಟ್ಟ ಕಡೆಯ ಅವಕಾಶ. ಇನ್ನು ಮುಂದೆ ಅವರನ್ನು ಯಾರೂ ಸೇರಿಸುವುದಿಲ್ಲ. ವಿಶ್ವನಾಥ್ ಅವರನ್ನು ಕರೆದುಕೊಂಡು ತಪ್ಪು ಮಾಡಿದ್ದೇವೆ ಅನ್ನಿಸುತ್ತಿದೆ ಎಂದು ಹೇಳಿದರು.
42 ವರ್ಷಗಳಿಂದ ಒಬ್ಬ ವಿಶ್ವನಾಥ್ ಬಿಜೆಪಿಯಲ್ಲಿ ಇದ್ದ. ಕೆಲ ರಾಜಕೀಯ ವಿಚಾರವಾಗಿ ಅವರನ್ನು ಕರೆದುಕೊಂಡು ಬಂದೆವು. ವಿಶ್ವನಾಥ್ ಅವರಿಗೆ ಇದು ಕಟ್ಟೆ ಕಡೆಯ ಅವಕಾಶ. ಮತ್ತೆ ಇನ್ಯಾರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್ಶೀಟ್ ಏನು?