ರಾಯಚೂರು: ಸಂಡೇ ಲಾಕ್ಡೌನ್ ಉಲ್ಲಂಘಿಸಿ ಓಡಾಡುವವರಿಗೆ ರಾಯಚೂರು ಪೊಲೀಸರು ಲಾಠಿ ರುಚಿ ತೋರಿಸಿ ವಾಪಸ್ ಕಳುಹಿಸುತ್ತಿದ್ದಾರೆ. ಭಾನುವಾರ ಲಾಕ್ ಡೌನ್ ಇರುವುದು ತಿಳಿದಿದ್ದರೂ ಜನ ಅನಾವಶ್ಯಕವಾಗಿ ರಸ್ತೆಗೆ ಇಳಿಯುವುದನ್ನ ಮುಂದುವರಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಬೈಕ್, ಕಾರ್ ಗಳನ್ನ ಜಪ್ತಿಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ. ಇನ್ನೂ ಬೀದಿ ಬದಿಯಲ್ಲಿ ಟೀ, ತರಕಾರಿ ಮಾರುವವರು ಸಾಮಾಜಿಕ ಅಂತರವಿಲ್ಲದೆ ಮಾಸ್ಕ್ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ರಸ್ತೆ ಬದಿಯ ವ್ಯಾಪಾರಿಗಳನ್ನ ಪೊಲೀಸರು ಚದುರಿಸಿ ಕಳುಹಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದ್ದರೂ ರಾಯಚೂರಿನಲ್ಲಿ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ. ಇದನ್ನೂ ಓದಿ: ಅನಗತ್ಯವಾಗಿ ಓಡಾಡ್ತಿದ್ದವರ ವಾಹನಗಳು ಸೀಜ್
ಜಿಲ್ಲೆಯಲ್ಲಿ ಬಸ್ ಸಂಚಾರ ಬಂದ್ ಆಗಿರುವುದರಿಂದ ಬೆಂಗಳೂರಿನಿಂದ ಬಂದ ಪ್ರಯಾಣಿಕರು ಗ್ರಾಮಗಳಿಗೆ ಹೋಗಲಾಗದೆ ಪರದಾಡಬೇಕಾಯಿತು. ಆಟೋಗಳ ಸಂಚಾರವೂ ಇಲ್ಲದೆ ಹತ್ತಿರದ ಗ್ರಾಮಗಳಿಗೆ ಜನ ನಡೆದುಕೊಂಡೆ ಹೋಗಬೇಕಾದ ಸ್ಥಿತಿಯಿದೆ. ಉಳಿದಂತೆ ರಾಯಚೂರಿನಲ್ಲಿ ಆಸ್ಪತ್ರೆ, ಔಷಧಿ ಅಂಗಡಿ, ಹಾಲು, ಅಗ್ನಿಶಾಮಕ ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳು, ವ್ಯಾಪಾರ ವಹಿವಾಟು ಬಂದ್ ಆಗಿವೆ. ಸಂಡೇ ಮಟನ್ ಮಾರ್ಕೆಟ್ ಕೂಡಾ ಬಂದ್ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ.