ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಶುಭ ಕೋರುವ ನೆಪದಲ್ಲಿ ತಂದೆಯನ್ನೇ ಕೊಂದಿದ್ದ ಮಗನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ವಿಲ್ಸನ್ ಗಾರ್ಡನ್ ನಿವಾಸಿ ಸಯ್ಯದ್ ಮುಸ್ತಾಫ್ (47) ಮೃತ ತಂದೆ. ಮೇ 25 ರಂದು ಕಲಾಸಿಪಾಳ್ಯದ ಪಟ್ನೂಲ್ ಪೇಟೆ ರಸ್ತೆ ಬದಿ ಚಾಕುವಿನಿಂದ ಇರಿದು ಆರೋಪಿ ಮಗ ಪರಾರಿಯಾಗಿದ್ದನು. ಇದೀಗ ಆರೋಪಿ 17 ವರ್ಷದ ಅಪ್ರಾಪ್ತ ಪುತ್ರನನ್ನ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮೃತ ಮುಸ್ತಾಫ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣದಿಂದ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬೇರೆ ಮಹಿಳೆ ಜೊತೆ ಮದುವೆಯಾಗಿದ್ದರು. ಆದರೆ ಮೊದಲ ಪತ್ನಿಯ ಅಪ್ರಾಪ್ತ ಪುತ್ರ ಎರಡನೇ ಮದುವೆಯನ್ನು ವಿರೋಧಿಸಿದ್ದನು. ಮೇ 25ರಂದು ಮುಸ್ತಾಫ್ ರಂಜಾನ್ ಹಬ್ಬದ ಸಲುವಾಗಿ ಕಲಾಸಿಪಾಳ್ಯದಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದರು. ಇದೇ ವೇಳೆ ಆರೋಪಿ ಕೂಡ ಅಜ್ಜಿ ಮನೆಗೆ ಬಂದಿದ್ದನು.
ಈ ವೇಳೆ ಆರೋಪಿ ತಂದೆಯನ್ನು ನೋಡಿ ಹಬ್ಬದ ಶುಭಾಶಯವನ್ನು ತಿಳಿಸಲು ಮನೆಯಿಂದ ಹೊರ ಕರೆದುಕೊಂಡು ಬಂದಿದ್ದನು. ನಂತರ ಸುಮಾರು 20 ನಿಮಿಷಗಳ ಕಾಲ ಇಬ್ಬರೂ ಮಾತನಾಡಿದ್ದಾರೆ. ಮಾತುಕತೆ ಬಳಿಕ ಆರೋಪಿ ಚಾಕುವಿನಿಂದ ತಂದೆಯ ಕುತ್ತಿಗೆಗೆ ತಿವಿದು ಪರಾರಿಯಾಗಿದ್ದನು. ಮುಸ್ತಾಫ್ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯಕ್ಕೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.