ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಹೆಚ್ಚು ಅನಾಹುತ ಸಂಭವಿಸಿದ್ದು, ಜನ ಪರದಾಡುವಂತಾಗಿದೆ. ಮನೆ ಕುಸಿತವಾಗಿ ವೃದ್ಧೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮರಿ ಮೊಮ್ಮಗ ಪವಾಡ ಸದೃಶ ರೀತಿ ಪಾರಾಗಿದ್ದಾನೆ.
ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮನೆ ಕುಸಿದು ವೃದ್ಧೆ ಸಾವನ್ನಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಪವಾಡ ಸದೃಶ್ಯ ರೀತಿಯಲ್ಲಿ ವೃದ್ಧೆಯ ಮೂರು ವರ್ಷದ ಮರಿಮೊಮ್ಮಗ ಪಾರಾಗಿದ್ದಾನೆ. ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಗುರುವಾರ ರಾತ್ರಿ ಮನೆ ಕುಸಿದು ಈರಮ್ಮ ಮೆಳ್ಳಿಕೇರಿ(75) ಸಾವನ್ನಪ್ಪಿದ್ದರು. ಈ ವೇಳೆ ಮನೆಯಲ್ಲಿದ್ದ ಈರಮ್ಮಳ ಮರಿಮೊಮ್ಮಗ ಮೂರು ವರ್ಷದ ಉದಯ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.
ಮನೆ ಬಿದ್ದ ರಭಸಕ್ಕೆ ವೃದ್ಧೆ ಈರಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಈ ವೇಳೆ ಮನೆಯಲ್ಲಿದ್ದ ಈರಮ್ಮಳ ಮರಿಮೊಮ್ಮಗ ಉದಯ ಮನೆ ಬಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ. ಕೂದಲೆಳೆ ಅಂತರದಲ್ಲಿ ಉದಯ ಪಾರಾಗಿದ್ದು, ಮಗು ಅಳುತ್ತಿದ್ದನ್ನು ಕಂಡು ನೆರೆಹೊರೆಯವರು ಉದಯನ್ನು ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಜನ ಪರದಾಡುವಂತಾಗಿದೆ. ಭಾರೀ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದ್ದು, ಹಲವು ಗ್ರಾಮಗಳು ಮುಳುಗಡೆಯಾಗಿವೆ.