ಕೊಲಂಬೋ: ಭಾರತ ಹಾಗೂ ಶ್ರೀಲಂಕಾ ಸರಣಿ ಮುಕ್ತಾಯಗೊಂಡಿದೆ. ಆದರೆ ಈ ಸರಣಿಯಲ್ಲಿ ಹಲವು ಬಗೆಯ ವೈಶಿಷ್ಟ್ಯವನ್ನು ಭಾರತ ತಂಡ ಅನುಭವಿಸಿದೆ. ಅದರಂತೆ 21ನೇ ಶತಮಾನದಲ್ಲಿ ಜನಿಸಿದ ಆಟಗಾರನೊಬ್ಬ ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡಿ ಸಾಧನೆ ಮಾಡಿದ್ದಾರೆ.
ಶ್ರೀಲಂಕಾ ಸರಣಿಗೆ ಭಾರತದ ಯುವ ತಂಡವನ್ನು ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಸ್ಥಾನ ಪಡೆದಿದ್ದರು. ಬಳಿಕ ಇವರಿಗೆ ಟಿ20 ಸರಣಿಯಲ್ಲಿ ಭಾರತದ ಪರ ಆಡುವ ಅವಕಾಶ ಕೂಡ ಸಿಕ್ಕಿತು. ಪಡಿಕ್ಕಲ್ 2000ರ ಜುಲೈ 7 ರಂದು ಜನಿಸಿದ್ದು, ಬಳಿಕ ಇದೀಗ ಭಾರತ ತಂಡದ ಪರ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಪಡಿಕ್ಕಲ್ 21ನೇ ಶತಮಾನದಲ್ಲಿ ಹುಟ್ಟಿ ಭಾರತ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಐಪಿಎಲ್ಗೂ ಮುನ್ನ ಡ್ಯಾಶಿಂಗ್ ಲುಕ್ನಲ್ಲಿ ಕಾಣಿಸಿಕೊಂಡ ಧೋನಿ
ಪಡಿಕ್ಕಲ್ ಭಾರತ ತಂಡದ ಪರ ಎರಡು ಟಿ20 ಪಂದ್ಯಗಳನ್ನು ಆಡುವ ಅವಕಾಶ ಪಡೆದರು ಕೂಡ ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಎರಡು ಪಂದ್ಯಗಳಿಂದ ಕೇವಲ 38 ರನ್ ಗಳನ್ನು ಬಾರಿಸಲಷ್ಟೇ ಶಕ್ತರಾದರು. ಆದರೆ ಮುಂದಿನ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿರುವ ಪಡಿಕ್ಕಲ್ಗೆ ಇನ್ನಷ್ಟು ಅವಕಾಶ ಕೊಡಬೇಕಾಗಿದೆ.
ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ನಾಯಕನಾಗಿ ಶಿಖರ್ ಧವನ್ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದರೆ, ತಂಡದ ಕೋಚ್ ಆಗಿ ಮೊದಲ ಬಾರಿಗೆ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕಾರ್ಯ ನಿರ್ವಹಿಸಿದ್ದರು. ಸರಣಿಯಲ್ಲಿ ಭಾರತ ತಂಡ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದರೆ. ಟಿ20 ಸರಣಿಯನ್ನು 1-2 ಅಂತರದಲ್ಲಿ ಸೋತು ಮಿಶ್ರ ಫಲ ಅನುಭವಿಸಿದೆ.