ಕಾರವಾರ: ಅರಬ್ಬಿ ಸಮದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಂಳಬರ್ ದ ಸುರೇಶ್ ಕಾರ್ವಿ ಎಂಬವರಿಗೆ ಸೇರಿದ ಮತ್ಯಾಂಜನೇಯ ಎಂಬ ಬೋಟ್ ತಾಂತ್ರಿಕ ಕಾರಣದಿಂದ ಭಟ್ಕಳದಿಂದ 19 ನಾಟಿಕನ್ ಮೈಲುದೂರದ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿದೆ.
ಬೋಟ್ ನಲ್ಲಿ ಇದ್ದ ಆರು ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೋಟ್ ಸಂಪೂರ್ಣ ಮುಳುಗಡೆ ಆಗಿದ್ದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು ಸ್ಥಳಕ್ಕೆ ಕರಾವಳಿ ಕಾವಲುಪಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ಅಂಕೋಲದಿಂದ ಭಟ್ಕಳದ ಅರಬ್ಬಿ ಸಮುದ್ರ ಭಾಗದಲ್ಲಿ ನಿಷೇಧಿತ ಲೈಟ್ ಪಿಷಿಂಗ್ ಗೆ ಈ ಬೋಟು ತೆರಳಿತ್ತು ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ. ಜೊತೆಗೆ ಬೋಟ್ ಗೆ ವಿಮೆ ಕೂಡ ಮಾಡಿಸಿರಲಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಈ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಅದೃಷ್ಟವಶಾತ್ ಬೋಟ್ ನಲ್ಲಿ ಇದ್ದ ಎಲ್ಲರೂ ಪಾರಾಗಿದ್ದು ಬೋಟ್ ಮುಳುಗಡೆ ಆಗುವ ವೇಳೆ ಪಕ್ಕದಲ್ಲೇ ಮೀನುಗಾರಿಕೆ ನಡೆಸುತಿದ್ದ ಮೀನುಗಾರರು ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ.