ಬೆಂಗಳೂರು: ಆ ದಿನಗಳು ಖ್ಯಾತಿಯ ನಟ ಚೇತನ್ ಇವತ್ತು ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.
ಬ್ರಾಹ್ಮಣ್ಯದ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ. ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡಿ, ಜಾತಿ ಜಾತಿಗಳ ನಡುವೆ ಗಲಭೆ ಉಂಟು ಮಾಡಲು ಪ್ರಚೋದನೆ ನೀಡಿದ್ದಾರೆ. ಅವರ ಹೇಳಿಕೆಗಳು ಯು ಟ್ಯೂಬ್ , ಫೇಸ್ ಬುಕ್ ನಲ್ಲಿ ವೈರಲ್ ಆಗಿವೆ ಎಂದು ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ದೂರು ನೀಡಿದ್ದರು. ದೂರು ಸಂಬಂಧ ಎಫ್ಐಆರ್ ದಾಖಲಿಸಿದ್ದ ಬಸವನಗುಡಿ ಪೊಲೀಸರು, ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಇದನ್ನೂ ಓದಿ:ಕನ್ನಡ ಸಿನಿಮಾ ಕಳಪೆ ಎಂದ ನೆಟ್ಟಿಗ – ಚೇತನ್ ಬೆಂಬಲ, ರಕ್ಷಿತ್ ಶೆಟ್ಟಿ ಕಿಡಿ
ಅದರಂತೆ ಇಂದು ವಿಚಾರಣೆಗೆ ಹಾಜರಾದ ಚೇತನ್ರವರಿಗೆ ಬ್ರಾಹ್ಮಣ್ಯ, ಪುರೋಹಿತ ಶಾಹಿ, ಬ್ರಾಹ್ಮಣ ವಿರೋಧವಾಗಿ ಮಾತಾಡಿರುವ ವೀಡಿಯೋ ನಿಮ್ಮದೇನಾ? ನಿಮ್ಮ ಪಾಸ್ಪೋರ್ಟ್ ನಂಬರ್ ಏನು? ವೀಸಾ ಮಾಹಿತಿ ತಿಳಿಸಿ? ಶ್ರೇಣಿಕೃತ ಅಸಮಾನತೆಯ ವ್ಯವಸ್ಥೆಯಿಂದ ಪುರೋಹಿತ ಶಾಹಿ ವರ್ಗದವರಿಗೆ ಹೇಗೆ ಲಾಭವಾಗುತ್ತದೆ? ಹೀಗೆ 36 ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆ ಮುಗಿಸಿ ಹೊರ ಬಂದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾನೂನು ಮೇಲೆ ಅಪಾರ ನಂಬಿಕೆ ಇದೆ. ಜಾತಿ, ಜನಾಂಗದ ವಿರುದ್ಧ ಹೋರಾಟ ಮಾಡುತ್ತಲ್ಲ. ಕೆಲವರು ಹುಟ್ಟಿದ ತಕ್ಷಣ ಶ್ರೇಷ್ಠ, ಕೆಲವರು ಕೀಳು ಅಂಥ ಮಾಡಬಾರದು. ಬೇಧ ಭಾವದ ವಿರುದ್ಧ ಹೋರಾಟ ಮಾಡುತ್ತೀವಿ. ಈ ಹೋರಾಟವನ್ನು ಮುಂದುವರಿಸುತ್ತೇವೆ. ನಮಗೆ ನ್ಯಾಯ ಸಿಗುತ್ತೆ. ವಿಚಾರಣೆಗೆ ಅಗತ್ಯವಿದ್ದಲ್ಲಿ ಮತ್ತೆ ಬರುತ್ತೇನೆ. 18ನೇ ತಾರೀಖು ಮತ್ತೆ ಬರುವುದಕ್ಕೆ ಹೇಳಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ಕೊಡುತ್ತೇನೆ. ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣ್ಯದ ವಿರುದ್ಧ ಪೋಸ್ಟ್ – ನಾಳೆ ನಟ ಚೇತನ್ ವಿಚಾರಣೆ