ಕೊಪ್ಪಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಾನು ಕೂಡ ಸಚಿವನಾಗುವ ಆಕಾಂಕ್ಷಿ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಇಂದು ಗಂಗಾವತಿಯಲ್ಲಿ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುವ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಾವು ಸಚಿವಾಕಾಂಕ್ಷಿಗಳು ಎಂದು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು, ನೀಡುತ್ತಾರೆ ಎಂಬ ವಿಶ್ವಾಸವಿದೆ. ಅದು ಗಂಗಾವತಿ ಕ್ಷೇತ್ರಕ್ಕೆ ನೀಡುತ್ತಾರೆ. ಖಂಡಿತವಾಗಿ ಗಂಗಾವತಿಗೆ ಸಚಿವ ಸ್ಥಾನ ಸಿಗುತ್ತದೆ, ನಾನು ಪಾಸಿಟಿವ್ ಆಗಿದ್ದೇನೆ. ಕೊಡದಿದ್ದರೆ ಎಂಬ ನೆಗಟಿವ್ ವಿಚಾರವಿಲ್ಲ, ಕೊಡದಿದ್ದರೆ ಮುಂದೆ ಎಂಬ ಪ್ರಶ್ನೆಯೇ ಇಲ್ಲ. ಕೊಡದಿದ್ದರೆ ಪಕ್ಷದ ಸಿದ್ದಾಂತಕ್ಕೆ ಬದ್ದ ಎಂದರು.
ಇತ್ತೀಚಿನ ಮೊಟ್ಟೆ ಡೀಲ್ ಪ್ರಕರಣದ ಬಗ್ಗೆಯೂ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ. ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ಕೆಲವು ಗ್ರಾಫಿಕ್ ಗಳು ಇರಬಹುದು ನನಗೆ ಗೊತ್ತಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಗಂಗಾವತಿ ಕ್ಷೇತ್ರದ ಕೆಲವರು ನನ್ನ ಮೇಲೆ ಅತಿ ಪ್ರೀತಿಯಿಂದಾಗಿ ಈ ಪ್ರಕರಣದಲ್ಲಿ ಸಿಕ್ಕಿಸಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಇದು ರಾಜಕೀಯ ಪ್ರೇರಿತವಾಗಿ ಮಾಡಿರುವ ಪ್ರಕರಣ. ಕೊನೆಯದಾಗಿ ಕ್ಷೇತ್ರದ ಜನತೆಯೇ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನವೇ ಅಂತಿಮ ಎಂದು ಶಾಸಕರು ಹೇಳಿದರು.