– ನಿತ್ಯ 50ಕ್ಕೂ ಹೆಚ್ಚು ಜನ ಕೊರೊನಾಗೆ ಬಲಿ
– ಪ್ರತ್ಯೇಕ ಜಾಗ ಗುರುತಿಸಿದರೂ ಪ್ರಯೋಜನವಾಗಿಲ್ಲ
– ಸ್ಮಶಾನಗಳಲ್ಲೀಗ ಜನವೋ ಜನ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇದೀಗ ಸ್ಮಶಾನಗಳದ್ದೇ ತಲೆನೋವಾಗಿದ್ದು, ಎಲ್ಲ ಸ್ಮಶಾನಗಳು ಫುಲ್ ಆಗಿರುವುದರಿಂದ ಹೆಣಗಳನ್ನು ಹೂಳಲು, ಸುಡಲು ಜನ ಪರದಾಡುವಂತಾಗಿದೆ.
ಕಳೆದ ನಾಲ್ಕೈದು ದಿನದಿಂದ ಬೆಂಗಳೂರಿನಲ್ಲಿ ಮರಣ ಪ್ರಮಾಣ ದಿಢೀರ್ ಹೆಚ್ಚಳವಾಗಿದ್ದು, ಕೊರೊನಾ ರೋಗಿಗಳ ಸಾವು ಬೆನ್ನಲ್ಲೇ ಈಗ ಮತ್ತೆ ನಗರದ ಸ್ಮಶಾನಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಕೊರೊನಾ ರೋಗಿಗಳನ್ನು ಸುಡಲು ಸರ್ಕಾರ ಪ್ರತ್ಯೇಕ ಜಾಗ ಗುರುತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಗಳೂರಿನಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಎರಡು ಸಾವಿರಕ್ಕೆ ಹತ್ತಿರವಾಗುತ್ತಿದೆ.
ಪ್ರತಿ ನಿತ್ಯ ಈಗ 50ಕ್ಕೂ ಅಧಿಕ ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಸ್ಮಶಾನಗಳು ಸಂಪೂರ್ಣ ಭರ್ತಿಯಾಗಿದ್ದು, ಸೋಂಕಿತರನ್ನು ಹೂಳುವುದು ಅಥವಾ ಸುಡುವು ಹೇಗೆ ಎಂದು ಆರೋಗ್ಯಾಧಿಕಾರಿಗಳು ಹಾಗೂ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಸ್ಮಶಾನದಲ್ಲಿ ಜಾಗವಿಲ್ಲದ ಕಾರಣ ಕೊರೊನಾ ಸೋಂಕಿತರ ಮೃತದೇಹವನ್ನು ಮರಳಿ ಆಸ್ಪತ್ರೆಗೆ ತರಲಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಕೊರೊನಾ ಮರಣ ಪ್ರಮಾಣ ಹೆಚ್ಚಳವಾಗಿದ್ದರಿಂದ ಸುಡಲು ಹೆಚ್ಚು ಸಮಯಾವಕಾಶ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಮೃತದೇಹವನ್ನು ಹೆಚ್ಚು ಕಾಯಿಸಬೇಕಾಗುತ್ತದೆ. ಹೀಗಾಗಿ ಮೃತದೇಹ ಕೊಳೆತುಹೋಗುತ್ತೆ ಎನ್ನುವ ಕಾರಣಕ್ಕೆ ವಾಪಾಸ್ ಶವಗಾರದ ಮಾರ್ಚರಿಯಲ್ಲೂ ಇಡಲಾಗುತ್ತೆ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿದೆ.
ದೊಡ್ಡ ಸಾಲು ಇರುವುದರಿಂದ ಎಂಟು ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತೆ. ಹೀಗಾಗಿ ವಾಪಾಸ್ ಮಾರ್ಚರಿಗೆ ಶವವನ್ನು ಕೊಂಡೊಯ್ಯುವ ಪರಿಸ್ಥಿತಿ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಸೋಂಕಿತರು ಹಾಗೂ ಮರಣ ಪ್ರಮಾಣದಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದ್ದು, ಇದೇ ರೀತಿಯದರೆ ಮುಂದೆ ಏನು ಎಂಬ ಪ್ರಶ್ನೆ ಅಧಿಕಾರಿಗಳು ಹಾಗೂ ಕುಟುಂಬಸ್ಥರಲ್ಲಿ ಕಾಡುತ್ತಿದೆ.