-ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದು ಆನಂದ್ ಸಿಂಗ್
ಬಳ್ಳಾರಿ: ಪಕ್ಷದ ಕೋರ್ ಕಮಿಟಿಯಲ್ಲಿ ಸಭೆಯಲ್ಲಿ ಎಚ್.ವಿಶ್ವನಾಥ್ ಅವರ ಬಗ್ಗೆಯೂ ತೀರ್ಮಾನವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬದಲಾವಣೆಯಾಗಿದೆ. ಬರುವ ದಿನಗಳಲ್ಲಿ ಖಂಡಿತ ಸೂಕ್ತ ಸ್ಥಾನ ಸಿಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಈ ಕುರಿತು ಒಂದು ಗಂಟೆ ಕಾಲ ಚರ್ಚಿಸಿದ್ದೇನೆ. ಅವರೂ ಭರವಸೆ ನೀಡಿದ್ದಾರೆ. ಕೋರ್ ಕಮಿಟಿಯಲ್ಲಿ ಅಂತಿಮ ತೀರ್ಮಾನವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬದಲಾವಣೆ ಆಗಿದೆ. ಎಚ್.ವಿಶ್ವನಾಥ್ ಅವರ ಜೊತೆಗೆ ನಾವೆಲ್ಲರೂ ಇದ್ದೇವೆ ಎಂದರು.
ವಿಶ್ವನಾಥ್ ಅವರಿಗೆ ಪರಿಷತ್ ಟಿಕೆಟ್ ತಪ್ಪಲು ಸಿದ್ದರಾಮಯ್ಯ, ಎಚ್ಡಿ ಕುಮಾರಸ್ವಾಮಿ ಕಾರಣ ಎನ್ನುವ ವಿಶ್ವನಾಥ್ ಅವರ ಹೇಳಿಕೆ ಸುಳ್ಳು. ಎಚ್ಡಿ ಕುಮಾರಸ್ವಾಮಿಗೂ, ಸಿದ್ದರಾಮಯ್ಯಗೂ ಬಿಜೆಪಿಗೂ ಸಂಬಂಧವಿಲ್ಲ ಎಂದರು.
ಇದೇ ವೇಳೆ ಸಮ್ಮಿಶ್ರ ಸರ್ಕಾರ ಪತನದ ಕುರಿತು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಮೊದಲು ರಾಜೀನಾಮೆ ಕೊಟ್ಟಿದ್ದು ಆನಂದ್ ಸಿಂಗ್. ಮೊದಲು ರಾಜೀನಾಮೆ ನೀಡುವ ಧೈರ್ಯ ಮಾಡಿದ್ದು ಆನಂದ ಸಿಂಗ್, ಅವರಿಂದಾಗಿ ನಾವು ಸಚಿವರಾಗಿದ್ದೇವೆ. ರಾಜೀನಾಮೆಗೆ ಫೌಂಡೇಶನ್ ಹಾಕಿದ್ದು ಆನಂದ್ ಸಿಂಗ್ ಎಂದು ಬಣ್ಣಿಸಿದರು. ಎಲ್ಲರೂ ಕೊಡ್ತಿವಿ, ಕೊಡ್ತಿವಿ ಅಂತ ಹೇಳಿದ್ದರು. ಆದರೆ ಯಾರೂ ಕೊಡಲಿಲ್ಲ. ಆನಂದ್ ಸಿಂಗ್ ಮೊದಲು ಕೊಟ್ಟು ಧೈರ್ಯ ಪ್ರದರ್ಶಿಸಿದರು. ನಂತರ ನಾವು ರಾಜೀನಾಮೆ ಕೊಟ್ಟೆವು. ಆ ಮೂಲಕ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಬರಲು ಕಾರಣವಾದೆವು ಎಂದು ತಿಳಿಸಿದರು.